ಆಗ್ರಾ: ತಾಜ್ ಮಹಲ್ ಮೂಲತಃ ಶಿವನ ದೇವಾಲಯವಾಗಿತ್ತು ಎಂದು ಹೇಳುತ್ತಾ,'ಕನ್ವರ್'ಗಳನ್ನು (ಶಿವನಿಗೆ ಅರ್ಪಿಸುವ ಪವಿತ್ರ ಜಲದ ಪಾತ್ರೆಗಳು) ಹೊತ್ತುಕೊಂಡು ಅಲ್ಲಿಗೆ ಪ್ರವೇಶಿಸಲು ಯತ್ನಿಸಿದ ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರನ್ನು ಪೊಲೀಸರು ತಡೆದಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದಂದು ಈ ಸಂರಕ್ಷಿತ ಸ್ಮಾರಕದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಆ ಸಂಘಟನೆಯು ಉದ್ದೇಶಿಸಿತ್ತು ಎನ್ನಲಾಗಿದೆ.
ಸಂಘಟನೆಗೆ ಸೇರಿದ 11 ಮಹಿಳೆಯರು 'ಕನ್ವರ್'ಗಳನ್ನು ಹೊತ್ತುಕೊಂಡು ತಾಜ್ ಮಹಲ್ನತ್ತ ಸಾಗುತ್ತಿದ್ದಾಗ ಅವರನ್ನು ಮಾರ್ಗ ಮಧ್ಯದಲ್ಲಿಯೇ ತಡೆಯಲಾಗಿದೆ. ಬಳಿಕ ಅವರನ್ನು ರಾಜೇಶ್ವರ ದೇವಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಶಿವಲಿಂಗಕ್ಕೆ ಪವಿತ್ರ ಜಲಾಭಿಷೇಕ ನೆರವೇರಿಸಿದ್ದಾರೆ.
"ಧಾರ್ಮಿಕ ವಿಧಿವಿಧಾನ ನೆರವೇರಿಸಲು ಈ ಗುಂಪು ಪಶ್ಚಿಮ ದ್ವಾರದ ಮೂಲಕ ತಾಜ್ ಮಹಲ್ನತ್ತ ಸಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಮೊದಲೇ ತಿಳಿದಿತ್ತು. ಅವರನ್ನು ದಾರಿಯಲ್ಲೇ ತಡೆದು ರಾಜೇಶ್ವರ ದೇವಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಜಲಾಭಿಷೇಕ ಮಾಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಾಜ್ ಮಹಲ್ ಮೂಲತಃ ಶಿವನ ದೇವಾಲಯವಾಗಿತ್ತು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷೆ ಮೀರಾ ರಾಥೋರ್ ಆರೋಪಿಸಿದ್ದಾರೆ. ತಾಜ್ ಮಹಲ್ನಲ್ಲಿ ಕವ್ವಾಲಿ ಕಾರ್ಯಕ್ರಮಗಳನ್ನು ನಡೆಸಬಹುದಾದರೆ, ನಮಗೂ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಈ ಬಾರಿ ನಮ್ಮನ್ನು ತಡೆಯಲಾಗಿದೆ, ಆದರೆ ಶ್ರಾವಣ ಮಾಸದಲ್ಲಿ ಇನ್ನೂ ಹಲವು ಸೋಮವಾರಗಳಿವೆ. ನಾವು ಮತ್ತೆ 'ಕನ್ವರ್'ಗಳನ್ನು ಹೊತ್ತುಕೊಂಡು ಬಂದು ಪೂಜೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ತಾಜ್ ಮಹಲ್ ಶಿವನ ದೇವಾಲಯವೆಂದು ಪ್ರತಿಪಾದಿಸುವ ಅಖಿಲ ಭಾರತ ಹಿಂದೂ ಮಹಾಸಭಾದಂತಹ ಬಲಪಂಥೀಯ ಗುಂಪುಗಳು, ಶ್ರಾವಣ ಮಾಸದಲ್ಲಿ ಗಂಗಾಜಲವನ್ನು ಅರ್ಪಿಸಲು ಅಲ್ಲಿಗೆ ಪ್ರವೇಶಿಸಲು ಆಗಾಗ್ಗೆ ಪ್ರಯತ್ನಿಸುತ್ತವೆ. ತಾಜ್ ಮಹಲ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಡಿಯಲ್ಲಿ ಬರುವ ಸಂರಕ್ಷಿತ ಸ್ಮಾರಕವಾಗಿದೆ.