ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸರ್ಕಾರದ ಮೊದಲ ಬಜೆಟ್(2026-27) ಬುಧವಾರ ಮಂಡನೆಯಾಗಿದ್ದು, ಮಹಿಳೆಯರು ಹಾಗೂ ಯುವಜನತೆಗೆ ಬಂಪರ್ ಗಿಫ್ಟ್ ನೀಡಲಾಗಿದೆ.
ಇಂದು ವಿಧಾನಸಭೆಯಲ್ಲಿ 2026-27ನೇ ಹಣಕಾಸು ವರ್ಷದ ಪರಿಷ್ಕೃತ ಬಜೆಟ್ ಅನ್ನು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಮಂಡಿಸಿದ್ದು, ವಿಜಯ್ ಅವರು ನಿಜವಾದ "ಜನ ನಾಯಗನ್' ಹಾಗೂ ಪ್ರಜಾಪ್ರಭುತ್ವವಾದಿ ಎಂದು ಪ್ರತಿಪಾದಿಸಿದರು.
ಬಜೆಟ್ ನಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅಂದರೆ 44,527 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 39,609 ಕೋಟಿ ರೂ. ಹಂಚಿಕೆಯಾಗಿದೆ.
ಪುರಸಭೆ ಆಡಳಿತ ಮತ್ತು ನೀರು ಸರಬರಾಜುಗೆ 29,863 ಕೋಟಿ ರೂ. ಒದಗಿಸಿದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 23,357 ಕೋಟಿ ರೂ. ನೀಡಲಾಗಿದೆ.
ಮೂಲಸೌಕರ್ಯವನ್ನು ಹೆಚ್ಚಿಸಲು, ರಾಜ್ಯ ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳಿಗೆ 21,524 ಕೋಟಿ ರೂ. ಮತ್ತು ಇಂಧನಕ್ಕೆ 15,828 ಕೋಟಿ ರೂ. ಮೀಸಲಿಟ್ಟಿದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ 14,984 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಆಹಾರ ಮತ್ತು ಗ್ರಾಹಕ ರಕ್ಷಣೆ ಇಲಾಖೆಗೆ 14,830 ಕೋಟಿ ರೂ.ಗಳನ್ನು ನೀಡಲಾಗಿದೆ. ಸಾರಿಗೆ ಇಲಾಖೆಗೆ 13,561 ಕೋಟಿ ರೂ.ಗಳನ್ನು ನೀಡಲಾಗಿದೆ.
ಇತರ ಪ್ರಮುಖ ಹಂಚಿಕೆಗಳಲ್ಲಿ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕೆ 9,818 ಕೋಟಿ ರೂ.ಗಳು, ಜಲಸಂಪನ್ಮೂಲ ಇಲಾಖೆಗೆ 9,264 ಕೋಟಿ ರೂ.ಗಳು, ವಸತಿ ಮತ್ತು ನಗರಾಭಿವೃದ್ಧಿಗೆ 8,852 ಕೋಟಿ ರೂ.ಗಳು, ಉನ್ನತ ಶಿಕ್ಷಣಕ್ಕೆ 8,393 ಕೋಟಿ ರೂ. ಮತ್ತು ಸಹಕಾರಕ್ಕೆ 8,028 ಕೋಟಿ ರೂ.ಅನುದಾನ ನೀಡಲಾಗಿದೆ.
ಮಹಿಳೆಯರಿಗೆ ಬಂಪರ್ ಗಿಫ್ಟ್
ಮಹಿಳಾ ಫಲಾನುಭವಿಗಳಿಗೆ ಎಂಟು ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆಯನ್ನು ಪಡೆಯುವ “ಚಿನ್ನದ ನಾಣ್ಯ, ರೇಷ್ಮೆ ಸೀರೆ ಯೋಜನೆ”ಗೆ ₹812 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ. ಇದಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಯೋಜನೆಗೆ ₹560 ಕೋಟಿ ಮೀಸಲಿಡಲಾಗಿದೆ.
ಆದರೆ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಬೊಕ್ಕಸಕ್ಕೆ ಈಗಾಗಲೇ ಸಾಲದ ಹೊರೆ ಇರುವಾಗ, ಇಂತಹ ಯೋಜನೆಗಳಿಗೆ ಬೃಹತ್ ಮೊತ್ತವನ್ನು ವಿನಿಯೋಗಿಸುವುದು ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.