ಸುಜನ್ಗಢ (ರಾಜಸ್ಥಾನ): ಆಸ್ಪತ್ರೆಗೆ ಹೋಗೋದೇ ನಮಗಿರುವ ಕಾಯಿಲೆಯನ್ನು ವಾಸಿ ಮಾಡಿಕೊಳ್ಳಲು. ಅದರಂತೆ, ಹುಷಾರಿಲ್ಲ ಎಂದು ಮಹಿಳೆಯೊಬ್ಬರು ಸರ್ಕಾರಿ ಫತೇಪುರಿಯಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಹೀಗೆ ಬಂದವರಿಗಾಗಿ ತೆರೆದಿತ್ತು ಮಸಣದ ಬಾಗಿಲು. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಹುಷಾರಿಲ್ಲ ಎಂದು ಮಹಿಳೆಯೊಬ್ಬರು ರಾಜಸ್ಥಾನದ ಚುರು ಜಿಲ್ಲೆಯ ಸುಜನ್ಗಢದಲ್ಲಿರುವ ಸರ್ಕಾರಿ ಫತೇಪುರಿಯಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ಹೀಗೆ, ಬಂದವಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ಹೋಗುವಾಗ ವರಾಂಡದ ಸೀಲಿಂಗ್ ಕುಸಿದು ಬಿದ್ದು ತಲೆಗೆ ಪೆಟ್ಟು ಬಿದಿದೆ. ಇನ್ನು, ಈ ಘಟನೆಯು ಆಗಸ್ಟ್ 5, ಬುಧವಾರದಂದು ಮಧ್ಯಾಹ್ನ ಸುಮಾರು 1:18 ಕ್ಕೆ ನಡೆದಿದೆ ಎನ್ನಲಾಗಿದ್ದು, ಆಸ್ಪತ್ರೆಯ ಆವರಣದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಮುಂದುವರೆದು, ಗಾಯಗೊಂಡ ಮಹಿಳೆಯನ್ನು ಸುಜನ್ಗಢದ ಗುಲೇರಿಯಾ ನಿವಾಸಿ, 25 ವರ್ಷದ ಕಿರಣ್ ಮೇಘವಾಲ್ ಎಂದು ಗುರುತಿಸಲಾಗಿದೆ. ಇವರು ಹತ್ತಿರದ ಖಾಸಗಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗಿದ್ದು, ಆಸ್ಪತ್ರೆಯ ವರಾಂಡದ ಪ್ರಮುಖ ಪ್ರವೇಶ ದ್ವಾರದ ಬಳಿ ಅವರು ನಿಂತಿದ್ದಾಗ, ಭಾರಿ ಪ್ರಮಾಣದ ಕಾಂಕ್ರೀಟ್ ಪ್ಲಾಸ್ಟರ್ ಮತ್ತು ಸಿಮೆಂಟ್ ಇದ್ದಕ್ಕಿದ್ದಂತೆ ಮುರಿದು ನೇರವಾಗಿ ಅವರ ತಲೆಯ ಮೇಲೆ ಬಿದ್ದಿದೆ. ಏತನ್ಮಧ್ಯೆ, ಘಟನೆಯ ನಂತರ ಅಲ್ಲಿದ್ದ ಸಾರ್ವಜನಿಕರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಆಕೆಯ ನೆರವಿಗೆ ಧಾವಿಸಿ, ಸುರಕ್ಷತೆಗಾಗಿ ಆಸ್ಪತ್ರೆಯ ಒಳಗೆ ಕರೆದೊಯ್ದಿದ್ದಾರೆ. ಜೊತೆಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡು ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಇನ್ನು ಘಟನೆಯ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಉಸ್ತುವಾರಿ ವೈದ್ಯ ಡಾ. ಬಂಶೀಧರ್ ಅವರು, ನಾಥೋ ಕಾ ತಾಲಾಬ್ ಪ್ರದೇಶದಲ್ಲಿರುವ ಈ ಆಸ್ಪತ್ರೆಯ ವರಾಂಡಾ ರಚನೆಯು ದೀರ್ಘಕಾಲದಿಂದ ದುರ್ಬಲಗೊಂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹಾಗಾಗಿ, ಹಳೆಯ ಮತ್ತು ಜರ್ಜರಿತ ಸ್ಥಿತಿಯಲ್ಲಿದ್ದ ಟ್ರಾಮಾ ಸೆಂಟರ್ ಕಟ್ಟಡದಲ್ಲಿ ಈ ಹೆರಿಗೆ ವಿಭಾಗವನ್ನು ನಡೆಸಲಾಗುತ್ತಿತ್ತು. ಜೊತೆಗೆ ಕಟ್ಟಡದ ಕಳಪೆ ಸ್ಥಿತಿಯ ಬಗ್ಗೆ ಘಟನೆಗೂ ಮುನ್ನವೇ ಲೋಕೋಪಯೋಗಿ ಇಲಾಖೆಗೆ (PWD) ಅಧಿಕೃತ ಪತ್ರ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ.