ಮುಂಬೈ: 'Gen Z'ಗಳಿಗೆ ಬೆಂಬಲ ವ್ಯಕ್ತಪಡಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನಡೆಯನ್ನು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಶುಕ್ರವಾರ ಸ್ವಾಗತಿಸಿದ್ದಾರೆ ಮತ್ತು ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು "ದೇಶ ವಿರೋಧಿಗಳು" ಎಂದು ಬ್ರಾಂಡ್ ಮಾಡುವುದನ್ನು ಮೊದಲು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಮುಂಬೈನ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ(ಎನ್ಎಂಎಸಿಸಿ) ಜೆನ್ ಝೆಡ್ ಮತ್ತು ಜೆನ್ ಆಲ್ಫಾ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ಸಂದರ್ಭದಲ್ಲಿ ಮೋಹನ್ ಭಾಗವತ್ ಅವರು ಯುವಕರಿಗೆ ನಿಜವಾದ ಸಮಸ್ಯೆಗಳ ವಿರುದ್ಧ ಪ್ರತಿಭಟಿಸುವ ಹಕ್ಕಿದೆ ಮತ್ತು ಅವರಿಗೆ ದೇಶ ವಿರೋಧಿ ಎಂದು ಹಣೆಪಟ್ಟಿ ಕಟ್ಟಬಾರದು ಎಂದು ಹೇಳಿದ ಒಂದು ದಿನದ ನಂತರ ದೀಪ್ಕೆ ಈ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ದೀಪ್ಕೆ, ಜೆನ್ ಝಡ್ ಪ್ರತಿಭಟನಾಕಾರರನ್ನು ದೇಶ ವಿರೋಧಿ ಎಂದು ಕರೆಯಬಾರದು ಎಂಬ ಭಾಗವತ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಮತ್ತು ಇದು ಅತ್ಯಂತ ಮಹತ್ವದ ತೀರ್ಮಾನವಾಗಿದೆ ಎಂದರು.
"ನಿನ್ನೆ ಮೋಹನ್ ಭಾಗವತ್ ನೀಡಿದ ಅತ್ಯಂತ ಮಹತ್ವದ ಹೇಳಿಕೆಯೆಂದರೆ ಜೆನ್ ಝಡ್ ಯುವಕರನ್ನು ದೇಶ ವಿರೋಧಿಗಳು ಎಂದು ಕರೆಯಬಾರದು ಎಂದು ಹೇಳಿರುವುದು ಮತ್ತು ಅವರಿಗೆ ಪ್ರತಿಭಟಿಸುವ ಹಕ್ಕು ಇದೆ ಎಂದು ಹೇಳಿರುವುದು. ನಾನು ಇದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ದೀಪ್ಕೆ ಹೇಳಿದ್ದಾರೆ.
ಭಾಗವತ್ ಅವರನ್ನು ಬಿಜೆಪಿಯ ಮಾರ್ಗದರ್ಶಕ ಎಂದು ಕರೆದ ದೀಪ್ಕೆ, ಅದೇ ಸಂದೇಶವನ್ನು ಆ ಪಕ್ಷದ ನಾಯಕತ್ವಕ್ಕೂ ನೀಡಬೇಕು ಎಂದು ಒತ್ತಾಯಿಸಿದರು.
"ಮೋಹನ್ ಭಾಗವತ್ ಅವರು ಒಂದು ರೀತಿಯಲ್ಲಿ ಬಿಜೆಪಿಗೆ ಮಾರ್ಗದರ್ಶಕ ಮತ್ತು ನರೇಂದ್ರ ಮೋದಿ ಅವರಿಗೆ ಗಾಡ್ಫಾದರ್ ಇದ್ದಂತೆ. ಅವರು ಬಿಜೆಪಿ ನಾಯಕರು ಮತ್ತು ನರೇಂದ್ರ ಮೋದಿ ಅವರಿಗೆ ಇದೇ ಸಂದೇಶವನ್ನು ನೀಡಬೇಕೆಂದು ನಾನು ಬಯಸುತ್ತೇನೆ - ಈ ವಿದ್ಯಾರ್ಥಿಗಳು ಮತ್ತು ಯುವಕರನ್ನು ದೇಶ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವುದನ್ನು ನಿಲ್ಲಿಸಬೇಕು" ಎಂದು ಅವರು ಹೇಳಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಹಲವಾರು ಬಿಜೆಪಿ ನಾಯಕರು ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ದೀಪ್ಕೆ ಆರೋಪಿಸಿದ್ದಾರೆ.
"ಬಿಜೆಪಿ ಸದಸ್ಯರೇ ಅವರನ್ನು ದೇಶ ವಿರೋಧಿಗಳು ಎಂದು ಕರೆಯುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ನಮ್ಮನ್ನು 'ಭಯೋತ್ಪಾದಕರ ಬಿ-ತಂಡ' ಎಂದು ಕರೆದರು ಮತ್ತು ನಿತಿನ್ ನಬಿನ್ ವಿದ್ಯಾರ್ಥಿಗಳನ್ನು 'ವೈರಸ್' ಎಂದು ಟೀಕಿಸಿದರು. ಅವರು ಈಗ ಮೋಹನ್ ಭಾಗವತ್ ಜಿ ಅವರ ಮಾತನ್ನು ಪಾಲಿಸುತ್ತಾರೆ ಮತ್ತು ಅವರ ಮಾತುಗಳನ್ನು ಕೇಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಬಿಜೆಪಿಗೆ ಆರ್ಎಸ್ಎಸ್ ವಿರುದ್ಧವಾಗಿ ಏನನ್ನೂ ಹೇಳುವ ಸಾಧ್ಯತೆಯಿಲ್ಲ ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ದಾರಿತಪ್ಪಿಸುವ ನಕಲಿ ವಿಡಿಯೋಗಳ ಪ್ರಸರಣದ ಬಗ್ಗೆ ಭಾಗವತ್ ಅವರ ಕಳವಳಕ್ಕೆ ಪ್ರತಿಕ್ರಿಯಿಸಿದ ದೀಪ್ಕೆ, ನಕಲಿ ವಿಷಯದ ಬಗ್ಗೆ ತನಿಖೆ ಮಾಡಬೇಕು ಎಂದರು.
"ಇದನ್ನು ಖಂಡಿತವಾಗಿಯೂ ತನಿಖೆ ಮಾಡಬೇಕು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಗರಿಷ್ಠ ಸಂಖ್ಯೆಯ ನಕಲಿ ವಿಡಿಯೋಗಳು ಐಟಿ ಸೆಲ್ನಿಂದ ಹುಟ್ಟಿಕೊಂಡಿವೆ. ಆದ್ದರಿಂದ, ಮೋಹನ್ ಭಾಗವತ್ ಅವರ ಸಲಹೆಯನ್ನು ಸ್ವೀಕರಿಸಬೇಕೆಂದು ನಾನು ಬಯಸುತ್ತೇನೆ; ಯಾವ ವಿಡಿಯೋಗಳು ನಿಜ ಮತ್ತು ಯಾವುದು ನಕಲಿ ಎಂದು ನಿರ್ಧರಿಸಲು ತನಿಖೆ ನಡೆಸಬೇಕು" ಎಂದು ಅವರು ಹೇಳಿದರು.