ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಫೇವರೆಟ್ ಬಿಜೆಪಿ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತನ್ನ ಅಚ್ಚುಮೆಚ್ಚಿನ ಬಿಜೆಪಿ ನಾಯಕ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ನ ಮಾಜಿ ಮುಖ್ಯಮಂತ್ರಿ, ರಾಹುಲ್ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗಿನ ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಂಬಂಧಗಳು ಎಂದಿಗೂ ಮುಂದುವರಿಯಲಿವೆಯಾದರೂ, ರಾಜಕೀಯವಾಗಿ ತಾವು ಬಿಜೆಪಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನನಗೆ ಅವರೊಂದಿಗೆ ಉತ್ತಮ ಒಡನಾಟವಿದೆ. ಅವರು ತುಂಬಾ ಸರಳ ಮತ್ತು ಸ್ನೇಹಪರ ವ್ಯಕ್ತಿ. ಅವರು ಮಿಲಿಟರಿ ಇತಿಹಾಸದ ತಜ್ಞರು. ಹಲೋ, ಅಂಕಲ್ ಅಮರಿಂದರ್ ಎಂದು ಗಾಂಧಿ ಹೇಳಿದ್ದಾರೆ. 'ಜೆನ್-ಝಡ್' (Gen Z ) ತಲುಪಲು ಗುರುವಾರ ಇನ್ಸ್ಟಾಗ್ರಾಮ್ನಲ್ಲಿ "ಆಸ್ಕ್ ಮಿ ಎನಿಥಿಂಗ್" (ನನ್ನನ್ನು ಏನೇ ಕೇಳಿ) ಎಂಬ ಸಂವಾದ ಕಾರ್ಯಕ್ರಮವನ್ನು ಆರಂಭಿಸಿದ ರಾಹುಲ್ ಗಾಂಧಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಹುಲ್ ಗಾಂಧಿ ತಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಸಂತೋಷದ ವಿಷಯ ಎಂದು ಶುಕ್ರವಾರ ಹೇಳಿದರು. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಚಿಕ್ಕಮಕ್ಕಳಾಗಿದ್ದಾಗಿನಿಂದಲೂ ತಮಗೆ ಪರಿಚಯವಿದ್ದು, ಅವರ ತಂದೆ ಹಾಗೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ತಮ್ಮ ಸಹಪಾಠಿ ಮತ್ತು ಸ್ನೇಹಿತರಾಗಿದ್ದರು ಎಂದು ಅವರು ಸ್ಮರಿಸಿದರು. ಭಾರತವನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಎಲ್ಲೆಡೆ ವೈಯಕ್ತಿಕ ಸಂಬಂಧಗಳನ್ನು ರಾಜಕೀಯ ಬದ್ಧತೆಗಳಿಂದ ಪ್ರತ್ಯೇಕವಾಗಿರಿಸಲಾಗುತ್ತದೆ ಎಂದು ಅಮರಿಂದರ್ ಹೇಳಿದರು.
ರಾಹುಲ್ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗಿನ ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಂಬಂಧಗಳು ಎಂದಿಗೂ ಮುಂದುವರಿಯಲಿವೆಯಾದರೂ, ರಾಜಕೀಯವಾಗಿ ತಾವು ಭಾರತೀಯ ಜನತಾ ಪಕ್ಷಕ್ಕೆ ಬದ್ಧರಾಗಿರುವುದಾಗಿ ಅವರು ಪುನರುಚ್ಚರಿಸಿದರು. 1980ರಲ್ಲಿ ತಾವು ಕಾಂಗ್ರೆಸ್ ಸಂಸದರಾಗಿದ್ದಾಗ, ತಮ್ಮ ತಾಯಿ ದಿವಂಗತ ಮಹಾರಾಣಿ ಮೊಹಿಂದರ್ ಕೌರ್ ಅವರು ಪ್ರತಿಸ್ಪರ್ಧಿ ಪಕ್ಷವೊಂದರ ಸಂಸದರಾಗಿದ್ದ ವಿಷಯವನ್ನು ನೆನಪಿಸಿಕೊಂಡ ಅಮರೀಂದರ್ ಸಿಂಗ್, ಹಾಗಾದರೆ, ನಾನು ನನ್ನ ತಾಯಿಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದರ್ಥವೇ?" ಎಂದು ಅವರು ಪ್ರಶ್ನಿಸಿದರು.
ಪಂಜಾಬ್ ಬಿಜೆಪಿ ಹಿರಿಯ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿಯಾವಾಲ್, "ಕ್ಯಾಪ್ಟನ್ ಸಾಹೇಬ್ ಪಂಜಾಬ್ನ ಅತ್ಯಂತ ಪ್ರಭಾವಿ ನಾಯಕರು ಎಂದು ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ನಲ್ಲಿ ತೀವ್ರ ಆಂತರಿಕ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವಾಗ ಗಾಂಧಿ ಅವರು ಕ್ಯಾಪ್ಟನ್ ಅಮರಿಂದರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ .ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದೂ ಅವರು ಹೇಳಿದ್ದಾರೆ.
2021ರಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆಯಲು ಕಾರಣವಾದ ಸನ್ನಿವೇಶಗಳನ್ನು ಪ್ರಸ್ತಾಪಿಸಿದ ಬಲಿಯಾವಾಲ್, ಆಗ 'ಕ್ಯಾಪ್ಟನ್ ಅಮರಿಂದರ್ ಕೂಲ್ ಆಗಿ ಕಾಣಲಿಲ್ಲ, ಅಥವಾ ನಾಯಕನಂತೆ ಅಥವಾ ಚಿಕ್ಕಪ್ಪನಂತೆ (ಅಂಕಲ್) ಕಾಣಲಿಲ್ಲ' ಎಂದು ಭಾವಿಸಿದ್ದ ಆ ಸಮಯವನ್ನೂ ಗಾಂಧಿ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.