ಮಮತಾ ಬ್ಯಾನರ್ಜಿ 
ದೇಶ

ಕೋಲ್ಕತ್ತಾ ಬಳಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ: 'ಪ್ರಾಣವೇ ಹೋಗಬೇಕಾಗಿತ್ತು' ಎಂದ ಮಾಜಿ ಸಿಎಂ!

ಪ್ರತಿಭಟನಾಕಾರರು ತೃಣಮೂಲ ಮುಖ್ಯಸ್ಥರ ಕಾರನ್ನು ಸುತ್ತುವರಿದು, ಅದರ ಮೇಲೆ ಕೆಸರನ್ನು ಬಳಿದಿದ್ದಲ್ಲದೆ, ಬೂಟುಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಇಟ್ಟಿಗೆ ಮತ್ತು ದೊಣ್ಣೆಗಳಿಂದ ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದು, ಈ ಘಟನೆಯಲ್ಲಿ ತಮ್ಮ ಪ್ರಾಣವೇ ಹೋಗಬೇಕಾಗಿತ್ತು ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಈ ದಾಳಿಯನ್ನು ಖಂಡಿಸಿದ್ದು, ಹಿಂಸಾಚಾರದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಾಕ್ ಅಪ್ ಡೆತ್ ಆಗಿದ್ದ ಪಕ್ಷದ ಕಾರ್ಯಕರ್ತರೊಬ್ಬರ ಮನೆಗೆ ತೆರಳುತ್ತಿದ್ದಾಗ ಹಾಲಿಸಹರ್‌ನಲ್ಲಿ ಬ್ಯಾನರ್ಜಿ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರು ತೃಣಮೂಲ ಮುಖ್ಯಸ್ಥರ ಕಾರನ್ನು ಸುತ್ತುವರಿದು, ಅದರ ಮೇಲೆ ಕೆಸರನ್ನು ಬಳಿದಿದ್ದಲ್ಲದೆ, ಬೂಟುಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾಗ "ಚೋರ್ ಭಗಾವೋ" (ಕಳ್ಳರನ್ನು ಓಡಿಸಿ) ಎಂಬ ಘೋಷಣೆಗಳು ಮೊಳಗಿದವು.

ಇಟ್ಟಿಗೆ ಮತ್ತು ಕಲ್ಲುಗಳು ತಮ್ಮಗೆ ಬಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಬ್ಯಾನರ್ಜಿ ನಂತರ ಸುದ್ದಿಗಾರರಿಗೆ ವಿವರಿಸಿದರು. "ಪೊಲೀಸರ ಸಮ್ಮುಖದಲ್ಲೇ ಹೊರಗಿನಿಂದ ಬಂದ ಸಮಾಜಘಾತುಕ ಶಕ್ತಿಗಳು ನನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದವು. ನನ್ನ ಕಾರಿನ ಕಿಟಕಿಗಳು ಮುಚ್ಚಿರದಿದ್ದರೆ, ಕಲ್ಲು ನನ್ನ ತಲೆಗೆ ಬಡಿದು ತಲೆ ಒಡೆಯುತ್ತಿತ್ತು. ನಾನು ಸಾಯಬಹುದಿತ್ತು. ಇಂತಹ ದಾಳಿಯನ್ನು ನಾನು ಎಂದಿಗೂ ಎದುರಿಸಿರಲಿಲ್ಲ. ನಮ್ಮನ್ನು ರಕ್ಷಿಸಲು ಪೊಲೀಸರು ಏನನ್ನೂ ಮಾಡಲಿಲ್ಲ. ಅವರು ಬಿಜೆಪಿಗೆ ಮಾತ್ರ ರಕ್ಷಣೆ ನೀಡುತ್ತಾರೆ ಎಂದು ಅವರು ಹೇಳಿದರು.

ಬ್ಯಾನರ್ಜಿ ಅವರೊಂದಿಗೆ ತೆರಳುತ್ತಿದ್ದ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದೆ ಡೋಲಾ ಸೇನ್ ಕೂಡ ಆಡಳಿತದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. "ಸುವೇಂದು ಅಧಿಕಾರಿ ಅವರು ಪೊಲೀಸರನ್ನು ಬಳಸಿಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ಲೋಕಸಭಾ ಸಂಸದರು ಆರೋಪಿಸಿದರು.

ಪಕ್ಷದ ಕಾರ್ಯಕರ್ತರು ಎಸಗುವ ಯಾವುದೇ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಸದಾ ಪ್ರತಿಪಾದಿಸುತ್ತಾ ಬಂದಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಅವರು, ಮಾಜಿ ಮುಖ್ಯಮಂತ್ರಿಯ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಮತ್ತು ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಪಕ್ಷವು ಹೀನಾಯ ಸೋಲನ್ನು ಅನುಭವಿಸಿದ ನಂತರ, ಪಕ್ಷದ ಸಂಸದ ಹಾಗೂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತಮ್ಮದೇ ಕ್ಷೇತ್ರವೊಂದರಲ್ಲಿ ದಾಳಿಗೆ ಒಳಗಾದ ಕೆಲವೇ ತಿಂಗಳುಗಳ ನಂತರ ಈ ದಾಳಿಯ ಘಟನೆ ನಡೆದಿದೆ. ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟರೆನ್ನಲಾದ ತೃಣಮೂಲ ಪಕ್ಷದ ಮಾಜಿ ಕೌನ್ಸಿಲರ್ ಒಬ್ಬರ ಪತಿ ಬಿರ್ಜು ಕಿಯೋಟ್ ಅವರ ಕುಟುಂಬವನ್ನು ಭೇಟಿ ಮಾಡಲು ಮಮತಾ ಬ್ಯಾನರ್ಜಿ ಇಂದು ಬೆಳಿಗ್ಗೆ ಉತ್ತರ 24 ಪರಗಣ ಜಿಲ್ಲೆಗೆ ಭೇಟಿ ನೀಡಿದ್ದರು.

ಸುಲಿಗೆ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಕಿಯೋಟ್ ಅವರನ್ನು ಕಳೆದ ಶುಕ್ರವಾರ ನ್ಯಾಯಾಲಯವು ಐದು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಲಾಕಪ್‌ನಲ್ಲಿ ತಮ್ಮ ಪತಿಯನ್ನು ಹಿಂಸಿಸಿ, ಥಳಿಸಿ ಕೊಲ್ಲಲಾಗಿದೆ ಎಂದು ಕಾಂಚ್ರಾಪಾರ ಪುರಸಭೆಯ ಮಾಜಿ ಕೌನ್ಸಿಲರ್ ಜೆನ್ನಿ ಶರ್ಮಾ ಆರೋಪಿಸಿದ್ದರು. ಎಫ್‌ಐಆರ್ (FIR) ನಲ್ಲಿ ಹೆಸರಿಲ್ಲದಿದ್ದರೂ ಪೊಲೀಸರು ಕಿಯೋಟ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಅಭಿಷೇಕ್ ಬ್ಯಾನರ್ಜಿ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ತಬ್ಬಿಬ್ಬಾದ ಬಾಲಿವುಡ್ ನಟಿ ನಿಕಿತಾ ರಾವಲ್, Video ವೈರಲ್

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಬಿಹಾರ ಪೊಲೀಸ್ ಠಾಣೆಯಿಂದ ಬೃಹತ್ ಲಾರಿ ಕದ್ದ ಖದೀಮರು!