ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಇಡೀ ರಾಜ್ಯಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಹೌದು.. ಒಡಿಶಾದಲ್ಲಿ ಹವಾಮಾನವು ‘ಸುಸ್ಪಷ್ಟ ವಾಯುಭಾರ ಕುಸಿತ’ವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಕಳೆದ 24 ಗಂಟೆಗಳಿಂದ ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ತಿಳಿಸಿದೆ.
ಒಡಿಶಾದಾದ್ಯಂತ ಅತಿ ಭಾರಿ ಹಾಗೂ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ IMD ‘ರೆಡ್ ವಾರ್ನಿಂಗ್’ (ತಕ್ಷಣ ಕ್ರಮ ಕೈಗೊಳ್ಳಿ) ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಹವಾಮಾನ ಸಂಸ್ಥೆ ಗುರುವಾರ ಬೆಳಗ್ಗೆ ನೀಡಿದ ಮಾಹಿತಿಯಲ್ಲಿ, “ಉತ್ತರ ಬಂಗಾಳ ಕೊಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಬಾಂಗ್ಲಾದೇಶ-ಪಶ್ಚಿಮ ಬಂಗಾಳ ಕರಾವಳಿ ಪ್ರದೇಶದಲ್ಲಿದ್ದ ಸುಸ್ಪಷ್ಟ ವಾಯುಭಾರ ಕುಸಿತವು ವಾಯವ್ಯ ದಿಕ್ಕಿನತ್ತ ಚಲಿಸಿದೆ.
ಇದು ವಾಯವ್ಯ ದಿಕ್ಕಿನಲ್ಲೇ ಮುಂದುವರಿದು ಗಂಗಾ ಪಶ್ಚಿಮ ಬಂಗಾಳದ ಮೂಲಕ ಜಾರ್ಖಂಡ್ ಕಡೆಗೆ ಸಾಗುವ ಸಾಧ್ಯತೆಯಿದೆ. ಮುಂದಿನ 12 ಗಂಟೆಗಳಲ್ಲಿ ಇದು ಮತ್ತಷ್ಟು ತೀವ್ರಗೊಂಡು ‘ಡಿಪ್ರೆಶನ್’ (ಖಿನ್ನ ವಾಯುಭಾರ) ಆಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದೆ.
‘ಡಿಪ್ರೆಶನ್’ ಎಂಬುದು ವಾಯುಭಾರ ಕುಸಿತಕ್ಕಿಂತ ಹೆಚ್ಚು ತೀವ್ರವಾಗಿರುವ, ಆದರೆ ಉಷ್ಣವಲಯದ ಚಂಡಮಾರುತಕ್ಕಿಂತ ಕಡಿಮೆ ತೀವ್ರತೆಯ ಹವಾಮಾನ ವ್ಯವಸ್ಥೆಯಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.
ಗುರುವಾರ ಒಡಿಶಾದಾದ್ಯಂತ ಅತಿ ಭಾರಿ ಹಾಗೂ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ‘ರೆಡ್ ವಾರ್ನಿಂಗ್’ (ತಕ್ಷಣ ಕ್ರಮ ಕೈಗೊಳ್ಳಿ) ಎಚ್ಚರಿಕೆ ನೀಡಿರುವ IMD, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದುವರಿದಿರುವ ಮಳೆಯ ಪರಿಸ್ಥಿತಿಯ ಪರಿಣಾಮ ಗಂಗಾ ಪಶ್ಚಿಮ ಬಂಗಾಳ, ಛತ್ತೀಸ್ಗಢ ಮತ್ತು ಜಾರ್ಖಂಡ್ ಮೇಲೂ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದೆ.