ನಾಂದೇಡ್: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಮಹಾರಾಷ್ಟ್ರದ ನಾಂದೇಡ್ನ ತಖ್ತ್ ಶ್ರೀ ಹಜೂರ್ ಸಾಹಿಬ್ನಲ್ಲಿರುವ ಮಾತಾ ಸಾಹಿಬ್ ಗುರುದ್ವಾರದ ಬಳಿ ಗುರುವಾರ ದಾಳಿ ನಡೆಸಲಾಗಿದೆ.
ಪಕ್ಷದ ಮೂಲಗಳು ತಿಳಿಸುವಂತೆ, ಬಾದಲ್ ಅವರು ಗುರುದ್ವಾರಕ್ಕೆ ತೆರಳುತ್ತಿದ್ದಾಗ ಮಧ್ಯಾಹ್ನದ ಸುಮಾರಿಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಅವರ ಬಳಿಕ ಬಂದ ದಾಳಿಕೋರ, ಅವರಿಗೆ ಇರಿದು ಕೊಲ್ಲಲು ಯತ್ನಿಸಿದಾಗ ಬಾದಲ್ ಅವರ ಕೈಗೆ ಗಾಯವಾಗಿದೆ. ಕೂಡಲೇ ಮಧ್ಯೆಪ್ರವೇಶಿಸಿದ ಭದ್ರತಾ ಸಿಬ್ಬಂದಿ, ದಾಳಿಕೋರನಿಂದ ಆಗುತ್ತಿದ್ದ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ.
ಮಧ್ಯಾಹ್ನ 1.45 ರ ಸುಮಾರಿಗೆ ನಡೆದ ಈ ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಘಟನೆಯ ನಂತರ ಬಾದಲ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯೂ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ, ಬಾದಲ್ ತಮ್ಮ ಕುಟುಂಬದೊಂದಿಗೆ ನಾಂದೇಡ್ನಲ್ಲಿರುವ ತಖ್ತ್ ಶ್ರೀ ಹಜೂರ್ ಸಾಹಿಬ್ಗೆ ಭೇಟಿ ನೀಡಿದ್ದರು. ದಾಳಿ ನಡೆದಾಗ ಬಾದಲ್ ಅವರೊಂದಿಗೆ ಪತ್ನಿ ಮತ್ತು ಬಟಿಂಡಾದ ಶಿರೋಮಣಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಇದ್ದರು.
ದಾಳಿಯ ನಂತರದ ವಿಡಿಯೋದಲ್ಲಿ ಬಾದಲ್ ಬಲಗೈಗೆ ಕೇಸರಿ ಬಟ್ಟೆ ಸುತ್ತಿಕೊಂಡು ನಡೆಯುತ್ತಿರುವುದು ಕಂಡುಬಂದಿದೆ.
ಈಮಧ್ಯೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ದಾಳಿಯ ಹಿಂದಿನ ಉದ್ದೇಶದ ಬಗ್ಗೆ ನಾಂದೇಡ್ ಪೊಲೀಸ್ ವರಿಷ್ಠಾಧಿಕಾರಿಯಿಂದ ವರದಿ ಕೋರಿದ್ದಾರೆ.
ಫಡ್ನವೀಸ್ ಅವರು ಬಾದಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು, ಬಾದಲ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಬಾದಲ್ ಮೇಲೆ ಸಾರ್ವಜನಿಕವಾಗಿ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿ. ಡಿಸೆಂಬರ್ 2024 ರಲ್ಲಿ, ಮಾಜಿ ಭಯೋತ್ಪಾದಕ ನರೈನ್ ಸಿಂಗ್ ಚೌರಾ ಅಮೃತಸರದ ಸುವರ್ಣ ದೇವಾಲಯದ ಹೊರಗೆ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಿದ್ದನು. ಆದರೆ, ಅದು ಗುರಿ ತಪ್ಪಿತ್ತು.
2007 ರಿಂದ 2017 ರವರೆಗೆ ಪಂಜಾಬ್ನಲ್ಲಿ ಎಸ್ಎಡಿ ಸರ್ಕಾರ ಮಾಡಿದ 'ತಪ್ಪುಗಳಿಗೆ' ಬಾದಲ್ ಮಾಡಿದ ಪ್ರಾಯಶ್ಚಿತ್ತದ ಎರಡನೇ ದಿನದ ವರದಿ ಮಾಡಲು ಸಿಖ್ ದೇವಾಲಯದ ಹೊರಗೆ ಜಮಾಯಿಸಿದ್ದ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಈ ದಾಳಿ ಸೆರೆಯಾಗಿದೆ.