ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಆತುರದ ಅಂತ್ಯಕ್ರಿಯೆಗೆ ನೆರವಾದ ಆರೋಪದಡಿ ಬಂಧಿತರಾಗಿರುವ ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್ ಅವರ ಮೇಲೆ ಶುಕ್ರವಾರ ಗುಂಪೊಂದು ದಾಳಿ ನಡೆಸಿದೆ.
ನಿರ್ಮಲ್ ಘೋಷ್ ಅವರನ್ನು ಗುರುವಾರ ಒಡಿಶಾದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಇಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಜನರ ಗುಂಪು ಮಾಜಿ ಶಾಸಕನ ಮೇಲೆ ಮೊಟ್ಟೆ, ಚಪ್ಪಲಿ ಮತ್ತು ಕೆಸರನ್ನು ಎರಚಿ ದಾಳಿ ಮಾಡಿದೆ.
ಮಾಜಿ ಶಾಸಕ ನಿರ್ಮಲ್ ಘೋಷ್ ಅವರು, ಪೊಲೀಸರ ವಶದಲ್ಲಿದ್ದಾಗಲೇ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಮೊಟ್ಟೆಗಳಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದ ಘೋಷ್ರನ್ನು ಬೆನ್ನಟ್ಟಿದ ಜನಸಮೂಹವು ಚಪ್ಪಲಿ ಮತ್ತು ಶೂಗಳ ಹಾರ ಹಾಕಿ, ಹಲ್ಲೆ ನಡೆಸಿತು. ಈ ವೇಳೆ ಪೊಲೀಸರು ಅವರನ್ನು ಕಷ್ಟಪಟ್ಟು ಪೊಲೀಸ್ ವ್ಯಾನ್ ಕಡೆಗೆ ಕರೆದೊಯ್ಯಬೇಕಾಯಿತು. ನಂತರ, ಅವರನ್ನು ಹಾಜರುಪಡಿಸುತ್ತಿದ್ದ ನ್ಯಾಯಾಲಯದ ಆವರಣದ ಹೊರಗೂ ಸಹ ಜನರು ಅವರ ವಿರುದ್ಧ ಚೋರ್, ಚೋರ್ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಆರ್ಜಿ ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಮತ್ತು ವ್ಯಕ್ತಿಯೋರ್ವನಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡಿಸಿದ ಆರೋಪದ ಮೇಲೆ ಘೋಷ್ ಅವರನ್ನು ನಿನ್ನೆ ಒಡಿಶಾದ ಸಂಭಲ್ಪುರದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಾಣಿಹಾಟಿ ಕ್ಷೇತ್ರದಲ್ಲಿ ಘೋಷ್ ವಿರುದ್ಧ ಮೃತ ವೈದ್ಯೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನಾ ದೇಬ್ನಾಥ್ ಗೆಲುವು ಸಾಧಿಸಿದ್ದಾರೆ.