ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ಡಿಎ) ಸೇರುವಂತೆ ಕೇಂದ್ರ ಸಚಿವರೊಬ್ಬರು ಆಹ್ವಾನ ನೀಡಿದ್ದಾರೆ.
"ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು" ಸಿಜೆಪಿ ಸಂಚಾಲಕ ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಗೆ ಸೇರುವುದನ್ನು ಪರಿಗಣಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೋಮವಾರ ಹೇಳಿದ್ದಾರೆ.
ಕೇಂದ್ರ ಸಚಿವರ ಈ ಪ್ರಸ್ತಾಪಕ್ಕೆ ಅಭಿಜೀತ್ ದೀಪ್ಕೆ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಸಿಜೆಪಿ ನಾಯಕ ಈ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದನ್ನು ತಳ್ಳಿಹಾಕಿದ್ದರು ಮತ್ತು ರಾಜಕೀಯ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಠಾವಳೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಆರ್ಪಿಐ(ಎ) ಪಕ್ಷಕ್ಕೆ ಸೇರುವುದನ್ನು ಪರಿಗಣಿಸಬೇಕು ಮತ್ತು ಸಮಾಜ ಹಾಗೂ ಪಕ್ಷವನ್ನು ಬಲಪಡಿಸಲು ಸಹಾಯ ಮಾಡಬೇಕು ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.
"ತಪ್ಪು ಮಾಡುವ ಜನ ಶಿಕ್ಷೆಗೆ ಗುರಿಯಾಗಬೇಕು ಎಂದು ನಂಬುವ ಸರ್ಕಾರ ನಮ್ಮದು. ಆದ್ದರಿಂದ ಅವರು ಆಡಳಿತದ ಬಣಕ್ಕೆ ಸೇರಬೇಕು" ಎಂದು ಅಠವಳೆ ಹೇಳಿದರು.
ಗಮನಾರ್ಹ ವಿಚಾರವೆಂದರೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಭಾಗವಾಗಿದೆ.
“ಅಭಿಜೀತ್ ದೀಪ್ಕೆ ಅಂಬೇಡ್ಕರ್ ವಾದಿ ಎಂದು ನಾನು ಭಾವಿಸುತ್ತೇನೆ. ಅವರು ಸಕ್ರಿಯವಾಗಿದ್ದಾರೆ ಮತ್ತು ಯುವಕ. ಅವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಎ) ಗೆ ಸೇರುವುದನ್ನು ಪರಿಗಣಿಸಬೇಕು” ಎಂದು ಕೇಂದ್ರ ಸಚಿವ ಮನವಿ ಮಾಡಿದ್ದಾರೆ.