ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮನೆಯೊಂದರಲ್ಲಿ ಕೌಟುಂಬಿಕ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, 31 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಅಳಿಯನನ್ನು ಆತನ ಅತ್ತೆ-ಮಾವ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇಂದು ಬೆಳಗ್ಗೆ ಈ ಆಘಾತಕಾರಿ ಘಟನೆ ನಡೆದಿದ್ದು, ಟೆಕ್ಕಿ ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ತಮ್ಮ ಮಗುವಿಗೆ ಔಷಧಿ ನೀಡುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ಸಮಯದಲ್ಲಿ, ರೇಖಾ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆ ಬಿಟ್ಟು ಹೋದರು. 10 ನಿಮಿಷಗಳ ನಂತರ ಅವರು ತಮ್ಮ ಇಬ್ಬರು ಸಹೋದರರು, ಅತ್ತಿಗೆ, ತಂದೆ, ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಪಸ್ ಬಂದಿದ್ದಾರೆ. ಪತ್ನಿ ಕುಟುಂಬಸ್ಥರನ್ನು ಕರೆತಂದು ಪತಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಟೆಕ್ಕಿ ತಾಯಿ ಬೇಡಿಕೊಂಡರೂ ಬಿಡದೇ ಹೊಡೆದಿದ್ದಾರೆ.
ಗಂಭೀರ ಗಾಯಗೊಂಡಿದ್ದ ವಿನಯ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ವಿನಯ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿನಯ್ ಅವರು ನೋಯ್ಡಾ ಮೂಲದ ಸಾಫ್ಟ್ವೇರ್ ಕಂಪನಿಯಾದ ಅಡೋಬ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ವಾರ್ಷಿಕ ಸುಮಾರು 60 ಲಕ್ಷ ರೂ. ಪ್ಯಾಕೇಜ್ ಇತ್ತು. ಅವರು ಸುಮಾರು ಮೂರುವರೆ ವರ್ಷಗಳ ಹಿಂದೆ ರೇಖಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣುಮಕ್ಕಳಿದ್ದರು.