ಮುಂಬೈ: ನಿನ್ನೆ ಭಾನುವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಮುಂಬೈನ ಮಜಗಾಂವ್ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಪಿಟಿಐ ಸುದ್ದಿಸಂಸ್ಥೆ ವರದಿ ಪ್ರಕಾರ, ಗಣೇಶ ಮೂರ್ತಿಯ ಆಗಮನದ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಗಣೇಶೋತ್ಸವ ಆಯೋಜಕರು, ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಿದ್ದ ವೇಳೆ ಕೆಲವರು ಮೊಟ್ಟೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಮುಂದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮುಂಬೈನ ಭುಲೆಶ್ವರ ಪ್ರದೇಶದಲ್ಲಿ ಶನಿವಾರ ರಾತ್ರಿ ‘ಭುಲೆಶ್ವರಾಚಾ ರಾಜಾ’ ಎಂಬ ಬೃಹತ್ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಿದ್ದ ವೇಳೆ ಅದು ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನೀಡಿದ ಮಾಹಿತಿ ಆಧರಿಸಿ ಎಎನ್ಐ ವರದಿ ಮಾಡಿದೆ.
ಭುಲೆಶ್ವರದ ಜಯ ಅಂಬೆ ಚೌಕ್ನ ಕಬೂತರ್ಖಾನಾ ಸಮೀಪ ಈ ಘಟನೆ ನಡೆದಿದೆ. ಘಟನೆಯ ಬಳಿಕ ಬಿಎಂಸಿ, ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸರು, ಸಂಚಾರ ಪೊಲೀಸರು, 108 ತುರ್ತು ಆಂಬ್ಯುಲೆನ್ಸ್ ಸೇವೆ ಹಾಗೂ ಬಿಎಂಸಿ ವಾರ್ಡ್ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಯಿತು.
ಅಖಿಲ್ ಭುಲೆಶ್ವರ ಸಾರ್ವಜನಿಕ ಗಣೇಶ ಮಂಡಳದ ಅಧ್ಯಕ್ಷ 33 ವರ್ಷದ ಸಂಕೇತ್ ನೆವಾಸೆ ಹಾಗೂ ಸ್ಥಳೀಯ ನಿವಾಸಿ 30 ವರ್ಷದ ಬೃಜೇಶ್ ಹೇಮಂತ್ ಜೋಶಿ ಅವರು ಕುಸಿದು ಬಿದ್ದ ಗಣೇಶ ಮೂರ್ತಿಯಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂರ್ತಿ ಕುಸಿದು ಬೀಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.