ನಟ ದೇವನ್ File photo | Express
ದೇಶ

'ಬಿಜೆಪಿಯಲ್ಲಿರುವುದು ನನಗೂ, ನನ್ನ ರಾಜ್ಯಕ್ಕೂ ಒಳ್ಳೆಯದಲ್ಲ': ರಾಜೀನಾಮೆ ಬಳಿಕ ಮಲಯಾಳಂ ನಟ ದೇವನ್‌ಗೆ TVK ಭರ್ಜರಿ ಆಫರ್!

ಬಿಜೆಪಿಯಲ್ಲಿ ಸುಮಾರು ಐದು ವರ್ಷಗಳ ಕಾಲ ಕಳೆದರೂ ಯಾವುದೇ ಅರ್ಥಪೂರ್ಣ ಜವಾಬ್ದಾರಿ ಸಿಗದ ಕಾರಣ, ಆಗಸ್ಟ್ 16 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ದೇವನ್ ತಿಳಿಸಿದರು.

ತಿರುವನಂತಪುರಂ: ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ ನಟ ದೇವನ್ ಅವರಿಗೆ, ನಟ ಹಾಗೂ ರಾಜಕಾರಣಿ ಸಿ ಜೋಸೆಫ್ ವಿಜಯ್ ನೇತೃತ್ವದ 'ತಮಿಳಿಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ಕೇರಳ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಫರ್ ನೀಡಿದೆ. ಈ ಬೆಳವಣಿಗೆಯು ತಮಿಳುನಾಡು ಮೂಲದ ಈ ಪಕ್ಷವು ಕೇರಳಕ್ಕೂ ವಿಸ್ತರಣೆಯಾಗುವ ಸಾಧ್ಯತೆಗೆ ಮುನ್ನುಡಿ ಬರೆದಿದೆ.

ಎನ್‌ಡಿಟಿವಿ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ದೇವನ್, ಬಿಜೆಪಿ ತೊರೆದ ಮರುದಿನವೇ ಟಿವಿಕೆ ಪಕ್ಷವು ತಮ್ಮನ್ನು ಸಂಪರ್ಕಿಸಿದ್ದು, ಈ ಕುರಿತು ಈಗಾಗಲೇ ವಿಸ್ತೃತ ಮಾತುಕತೆಗಳು ನಡೆದಿವೆ ಎಂದು ತಿಳಿಸಿದರು. ಸೆಪ್ಟೆಂಬರ್ 10ರ ನಂತರ ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿಯಾದ ಬಳಿಕ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಬಿಜೆಪಿಯಲ್ಲಿ ಸುಮಾರು ಐದು ವರ್ಷಗಳ ಕಾಲ ಕಳೆದರೂ ಯಾವುದೇ ಅರ್ಥಪೂರ್ಣ ಜವಾಬ್ದಾರಿ ಸಿಗದ ಕಾರಣ, ಆಗಸ್ಟ್ 16 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ದೇವನ್ ತಿಳಿಸಿದರು.

'ನಾನು ಕೆಲಸ ಮಾಡಲು ಬಿಜೆಪಿಗೆ ಬಂದಿದ್ದೆ. ಆದರೆ ಇವರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಇದೇ ಮುಖ್ಯ ಕಾರಣ. ಕಳೆದ ಐದು ವರ್ಷಗಳಿಂದ ನಾನು ಅವರೊಂದಿಗೆ ಇದ್ದೇನೆ. ಕೆಲಸ ಮಾಡುವುದು ಎಂದರೆ, ನಾನು ಅಲ್ಲಿ ಸುಮ್ಮನೆ ಕುಳಿತಿರುತ್ತೇನೆ ಅಷ್ಟೇ; ಅವರು ನನಗೆ ಯಾವುದೇ ಕೆಲಸವನ್ನೂ ನೀಡುವುದಿಲ್ಲ. ಯಾವುದೇ ಕೊಡುಗೆ ನೀಡಲು ಅವಕಾಶವಿಲ್ಲದೆ ಬಿಜೆಪಿಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ' ಎಂದು ತಿಳಿಸಿದರು.

'ಅಲ್ಲಿರುವುದು ನನಗೂ ಒಳ್ಳೆಯದಲ್ಲ, ನನ್ನ ರಾಜ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ರಾಜೀನಾಮೆ ನೀಡಿ ಹೊರಬಂದು, ನನ್ನ ದೃಷ್ಟಿಕೋನ ಹಾಗೂ ಧ್ಯೇಯೋದ್ದೇಶಗಳ ಮೂಲಕ ಜನರನ್ನು ತಲುಪಬಲ್ಲಂತಹ ಕೆಲಸವೊಂದನ್ನು ಮಾಡುವುದು ಉತ್ತಮ ಎಂದು ನಾನು ಭಾವಿಸಿದೆ. ನನ್ನ ರಾಜೀನಾಮೆ ವಿಷಯ ಸಾರ್ವಜನಿಕವಾದ ತಕ್ಷಣವೇ ರಾಜಕೀಯ ಅವಕಾಶಗಳು ಬರಲಾರಂಭಿಸಿದವು' ಎಂದು ಅವರು ಹೇಳಿದರು.

'ಕಾಂಗ್ರೆಸ್ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿತು. ಅವರು ಕರೆ ಮಾಡಿದಾಗ, 'ನನ್ನನ್ನು ಕ್ಷಮಿಸಿ, ನಿಮ್ಮೊಂದಿಗೆ ಸೇರಲು ನನಗೆ ಆಸಕ್ತಿಯಿಲ್ಲ' ಎಂದು ನಾನು ಅವರಿಗೆ ಹೇಳಿದೆ. ನಂತರ ಕೆಲವು ಸ್ಥಳೀಯ ಪಕ್ಷಗಳೂ ನನ್ನನ್ನು ಸಂಪರ್ಕಿಸಿದವು; ಅವಕ್ಕೂ ನಾನು 'ಇಲ್ಲ' ಎಂದೇ ಉತ್ತರಿಸಿದೆ' ಎಂದು ದೇವನ್ ಹೇಳಿದರು.

'ನಾನು ಆಗಸ್ಟ್ 16 ರಂದು ರಾಜೀನಾಮೆ ನೀಡಿದ್ದೆ. ಆಗಸ್ಟ್ 17ರ ಬೆಳಿಗ್ಗೆ, ಟಿವಿಕೆ ಪಕ್ಷದಿಂದ — ಅಂದರೆ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಕಚೇರಿಯಿಂದ ನನ್ನೊಂದಿಗೆ ಮಾತನಾಡಲು ಆಸಕ್ತಿ ಹೊಂದಿದ್ದಾರೆ ಎಂಬ ಕರೆ ಬಂತು' ಎಂದು ದೇವನ್ ತಿಳಿಸಿದರು.

ಟಿವಿಕೆ ಪ್ರತಿನಿಧಿಗಳು ಅದೇ ದಿನ ಚಾಲಕುಡಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ವರದಿಗಳ ಪ್ರಕಾರ, ಟಿವಿಕೆಯ ತಮಿಳುನಾಡು ಘಟಕದ ಇಬ್ಬರು ನಾಯಕರು ನಟಿ ಪ್ರಿಯಾಂಕಾ ಅವರೊಂದಿಗೆ ಸೇರಿ ದೇವನ್ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು. ಈ ಸಭೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ತರುವಾಯ, ಟಿವಿಕೆಯ ಹಿರಿಯ ನಾಯಕರು ಗೂಗಲ್ ಮೀಟ್ ಮೂಲಕ ದೇವನ್ ಅವರೊಂದಿಗೆ ಹೆಚ್ಚಿನ ಚರ್ಚೆ ನಡೆಸಿದರು.

ತಮ್ಮ ಮತ್ತು ವಿಜಯ್ ನಡುವೆ ಸಮಾನ ಅಂಶಗಳಿವೆ ಎಂಬ ವಿಷಯವನ್ನು ಮಾತುಕತೆಗಳು ಉಭಯ ಪಕ್ಷಗಳಿಗೂ ಮನವರಿಕೆ ಮಾಡಿಕೊಟ್ಟವು ಎಂದು ದೇವನ್ ಎನ್‌ಡಿಟಿವಿಗೆ (NDTV) ತಿಳಿಸಿದರು.

'ಜೋಸೆಫ್ ವಿಜಯ್ ಮತ್ತು ನನ್ನ ನಡುವೆ ಸಾಮ್ಯತೆಯಿದೆ. ನಮ್ಮ ಆಲೋಚನೆಗಳು, ಕಾರ್ಯಕ್ರಮಗಳು, ಸಿದ್ಧಾಂತ ಹಾಗೂ ಜನರ ಬಗೆಗಿನ ಬದ್ಧತೆ - ಇವೆಲ್ಲವೂ ಒಂದೇ ಆಗಿವೆ. ಆದ್ದರಿಂದ, ನಾವು ಒಟ್ಟಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಹಾಗೆ ಮಾಡುವುದೇ ಉತ್ತಮ ಎಂದು ನಾನು ಭಾವಿಸಿದೆ ಮತ್ತು ಅವರು ನನಗೆ ಕೇರಳದಲ್ಲಿ ಪಕ್ಷದ ರಾಜ್ಯ ನಾಯಕತ್ವವನ್ನು ನೀಡಿದರು. ಕೇರಳದಲ್ಲಿ ಅವರ ಪಕ್ಷದ ಮುಖ್ಯಸ್ಥರಾಗಿ, ಅಂದರೆ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕಿದೆ' ಎಂದು ಅವರು ಹೇಳಿದರು.

ವಿಜಯ್ ಅವರನ್ನು ಭೇಟಿಯಾಗಲು ದೇವನ್ ಅವರು ಸೆಪ್ಟೆಂಬರ್ 10ರ ನಂತರ ಚೆನ್ನೈಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಸೆಪ್ಟೆಂಬರ್ 8ರವರೆಗೆ ನಡೆಯಲಿರುವ ಸದ್ಯದ ವಿಧಾನಸಭೆ ಅಧಿವೇಶನದ ನಂತರ ಈ ಭೇಟಿಯನ್ನು ನಿಗದಿಪಡಿಸಲಾಗಿದೆ. ಭೇಟಿಯ ನಂತರವಷ್ಟೇ ಅಂತಿಮ ನಿರ್ಧಾರ ಮತ್ತು ಅಧಿಕೃತ ಘೋಷಣೆ ಹೊರಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ