ಗುವಾಹಟಿ (ಅಸ್ಸಾಂ): ತಾನೇ ಜನ್ಮ ಕೊಟ್ಟ ಮಗ ಅಲ್ವಾ, ಅವನನ್ನ ನಂಬದೆ ಮತ್ತೆ ಇನ್ಯಾರನ್ನ ನಂಬಬೇಕು ಎಂದು ಮನೆ ಬಿಟ್ಟು ಹೋದರೆ, ಸ್ವಂತ ಮಗನೇ ಅವರ ನಂಬಿಕೆಗೆ ದ್ರೋಹ ಬಗೆದು ಲಾಕರ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಗುಳುಂ ಮಾಡಿರುವ ಅಚ್ಚರಿಯ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದರಲ್ಲೂ, ಕದ್ದ ಆ ಹಣದಲ್ಲಿ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಂತಿಮವಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಈ ರೋಚಕ ಕಳ್ಳತನದ ಪೂರ್ಣ ವಿವರ ಇಲ್ಲಿದೆ.
ಏನಿದು ಘಟನೆ?
ಈ ವಿಲಕ್ಷಣ ಮತ್ತು ಆಘಾತಕಾರಿ ಕಳ್ಳತನ ಘಟನೆಯು ಅಸ್ಸಾಂ ರಾಜ್ಯದ ಜೋರ್ಹತ್ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು 25 ವರ್ಷದ ಯಶ್ ಧನುಕಾ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅದರಂತೆ, ಆಗಸ್ಟ್ 11 ರಂದು ಯಶ್ ಕುಟುಂಬದ ಸದಸ್ಯರೆಲ್ಲರೂ ವ್ಯವಹಾರದ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿದ ಯಶ್, ತಂದೆಯ ಮಲಗುವ ಕೋಣೆಯಲ್ಲಿದ್ದ ಲಾಕರ್ ಅನ್ನು ಒಡೆದಿದ್ದಾನೆ. ಹೀಗೆ, ಲಾಕರ್ ಒಡೆದವನೆ, ಕುಟುಂಬದವರು ವ್ಯಾಪಾರದ ಉದ್ದೇಶಕ್ಕಾಗಿ ಮನೆಯಲ್ಲಿ ಇಟ್ಟಿದ್ದ ₹50 ಲಕ್ಷ ನಗದು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಇನ್ನು, ಕುಟುಂಬಸ್ಥರು ಮನೆಗೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.
ಗೆಳತಿಯ ಮೇಲೆ ಲಕ್ಷಾಂತರ ರೂಪಾಯಿ ಖರ್ಚು
ಕದ್ದ ಹಣದಲ್ಲಿ ಯಶ್ ಅಗರ್ವಾಲ್ ತನ್ನ ದೀರ್ಘಕಾಲದ ಗೆಳತಿ ಪುಬಾಲಿ ದತ್ತಾಗೆ ಸುಮಾರು ₹1.5 ಲಕ್ಷ ಮೌಲ್ಯದ ಐಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಜೊತೆಗೆ, ಗೆಳತಿಯ ಖರ್ಚುಗಳಿಗಾಗಿ ಕೈತುಂಬಾ ನಗದು ನೀಡಿದ್ದಲ್ಲದೆ, ಅವಳೊಂದಿಗೆ ದೇಶದ ವಿವಿಧ ಭಾಗಗಳ ದುಬಾರಿ ಹೋಟೆಲ್ಗಳು ಮತ್ತು ರೆಸಾರ್ಟ್ಗಳಲ್ಲಿ ಉಳಿದುಕೊಂಡು ಐಷಾರಾಮಿ ಜೀವನ ನಡೆಸಿದ್ದಾನೆ. ಹೀಗೆ, ಕಳ್ಳತನ ಮಾಡಿದ ಹಣದಲ್ಲಿ ಸುಮಾರು ₹5 ಲಕ್ಷಕ್ಕೂ ಅಧಿಕ ಹಣವನ್ನು ಗೆಳತಿಯ ಮೇಲೆಯೇ ಖರ್ಚು ಮಾಡಿದ್ದಾನೆ.
ಇನ್ನು, ಕಳ್ಳತನದ ನಂತರ ಯಶ್ ಅಗರ್ವಾಲ್ ಅಸ್ಸಾಂನಿಂದ ಗುಜರಾತ್ನ ಅಹಮದಾಬಾದ್ಗೆ ಓಡಿಹೋಗಿ ತಲೆಮರೆಸಿಕೊಂಡಿದ್ದ. ಆದರೆ, ಜೋರ್ಹತ್ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ಯಶ್ನ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದ್ದಾರೆ. ಏತನ್ಮಧ್ಯೆ, ವಿಷಯ ತಿಳಿಯುತ್ತಿದ್ದಂತೆ ಆತನ ತಂದೆ ತಾವೇ ಖುದ್ದಾಗಿ ಗುಜರಾತ್ಗೆ ಪ್ರಯಾಣ ಬೆಳೆಸಿ, ಮಗನನ್ನು ಹಿಡಿದು ವಾಪಸ್ ಅಸ್ಸಾಂಗೆ ಕರೆತಂದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮುಂದುವರೆದು, ಪೊಲೀಸರ ವಿಚಾರಣೆ ವೇಳೆ ಯಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ, "ನನ್ನ ಸ್ನೇಹಿತರಾದ ಜಿತೇಂದ್ರ ಸೋಮಾನಿ ಮತ್ತು ರೋಹಿತ್ ಪ್ರಸಾದ್ ನನ್ನನ್ನು ದಾರಿ ತಪ್ಪಿಸಿ ಈ ಕಳ್ಳತನದ ಸಂಚು ರೂಪಿಸಿದ್ದರು. ಕೀ ತಯಾರಿಸುವವನನ್ನು ಕರೆತಂದು ಲಾಕರ್ ಒಡೆಯಲು ಅವರೇ ಸಹಾಯ ಮಾಡಿದ್ದರು" ಎಂದು ಹೇಳಿಕೆ ನೀಡಿದ್ದಾನೆ. ಪ್ರಸ್ತುತ ಯಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕೃತ್ಯಕ್ಕೆ ಪ್ರೇರಣೆ ನೀಡಿದ ಆತನ ಇಬ್ಬರು ಸ್ನೇಹಿತರು ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಗೆಳತಿಯನ್ನು ತನಿಖೆಯ ಭಾಗವಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.