ಶಹಜಹಾನ್ಪುರ (ಉತ್ತರ ಪ್ರದೇಶ): ರಾಜಕಾರಣಿಗಳು ಜನಸೇವೆಯೇ ಜನಾರ್ಧನ ಸೇವೆಯನ್ನುತ್ತಾ ಅಧಿಕಾರಕ್ಕೆ ಬರುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಜನರು ಇಲ್ಲ, ಜನಾರ್ದನನೂ ಇಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ! ಹೌದು, ಉತ್ತರ ಪ್ರದೇಶದ ಶಹಜಹಾನ್ಪುರ ಮಹಾನಗರ ಪಾಲಿಕೆಯ ಹಲವು ಕಾರ್ಪೊರೇಟರ್ಗಳು ಗಂಗಾಜಲ ಹಿಡಿದು, ಲಂಚದ ಹಣವನ್ನು ತಮ್ಮ ನಡುವೆ ಪ್ರಾಮಾಣಿಕವಾಗಿ ಹಂಚಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವೈರಲ್ ವಿಡಿಯೋ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಉತ್ತರ ಪ್ರದೇಶದ ಶಹಜಹಾನ್ಪುರ ಮಹಾನಗರ ಪಾಲಿಕೆಯ ಕೆಲವು ಕಾರ್ಪೊರೇಟರ್ಗಳು ಒಟ್ಟಿಗೆ ಕುಳಿತುಕೊಂಡು, ಒಬ್ಬರ ಕೈಯಲ್ಲಿ ಗಂಗಾಜಲವಿರುವ ಬಾಟಲಿಯನ್ನು ಹಿಡಿದು ಲಂಚದ ಹಣದ ಹಂಚಿಕೆ ಬಗ್ಗೆ ಪ್ರಮಾಣ ಮಾಡುತ್ತಿರುವುದು ಕಂಡುಬಂದಿದೆ. ಅದರಂತೆ, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಂದಿರುವ ಕಮಿಷನ್ ಹಣವನ್ನು ಎಲ್ಲರೂ ಸಮಾನವಾಗಿ ಮತ್ತು ಪ್ರಾಮಾಣಿಕವಾಗಿ ಹಂಚಿಕೊಳ್ಳಬೇಕು, ಯಾರೂ ಯಾರಿಗೂ ಮೋಸ ಮಾಡಬಾರದು ಎಂದು ಅವರು ಗಂಗಾಜಲದ ಮೇಲೆ ಆಣೆ ಮಾಡಿದ್ದಾರೆ. ಅದರಲ್ಲೂ, ಈ ವಿಡಿಯೋದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಪೊರೇಟರ್ಗಳು ಒಟ್ಟಿಗೆ ಇರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮುಂದುವರೆದು, ವೈರಲ್ ವಿಡಿಯೋದಲ್ಲಿ, ಮಹಾನಗರ ಪಾಲಿಕೆಗೆ ಬರುವ ಹಣವನ್ನು ಎಲ್ಲಾ 60 ಜನ ಸದಸ್ಯರ ನಡುವೆ ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ಮತ್ತು ಯಾವುದೇ ಸದಸ್ಯರು ಸಂಕಷ್ಟಕ್ಕೆ ಸಿಲುಕಿದಾಗ ಒಗ್ಗಟ್ಟಾಗಿ ನಿಲ್ಲುವ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಮಾಣವಚನವನ್ನು ಉಲ್ಲಂಘಿಸಿದ ಓರ್ವ ಪಾಲಿಕೆ ಸದಸ್ಯನನ್ನು, ಇತರರು ದೇಶದ್ರೋಹಿ ಎಂದು ಕರೆದಿರುವುದನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ.
ಮತ್ತೊಂದೆಡೆ, ಸಾಮಾನ್ಯವಾಗಿ, ಭ್ರಷ್ಟಾಚಾರವನ್ನು ತಡೆಯಲು ಗಂಗಾಜಲದ ಮೇಲೆ ಆಣೆ ಮಾಡುವುದನ್ನು ಕೇಳಿದ್ದೇವೆ. ಆದರೆ, ಲಂಚದ ಹಣವನ್ನು ಸರಿಯಾಗಿ ಹಂಚಿಕೊಳ್ಳಲು ಗಂಗಾಜಲದ ಮೇಲೆ ಪ್ರಮಾಣ ಮಾಡಿರುವುದನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು, ಈ ವಿಡಿಯೋ ವೈರಲ್ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜನರಿದ ಕೇಳಿಬಂದಿದೆ.