ಕಠ್ಮಂಡು: ಬಿಜೆಪಿಗೆ "ಅಗಾಧ ಯುವ ಅನುಯಾಯಿಗಳು" ಇದ್ದಾರೆ ಮತ್ತು ಅದರ ರಾಷ್ಟ್ರೀಯ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಸಂಸ್ಥೆಯಾದ ಆರ್ಎಸ್ಎಸ್ ನಲ್ಲಿ ಜೆನ್ ಝೀಗಳೇ ಹೆಚ್ಚಾಗಿದ್ದಾರೆ ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ನಂತರ ಜನಪ್ರಿಯವಾದ "ಜೆನ್ ಝೀ"ಗಳೇ ಆರ್ ಎಸ್ಎಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್ ಎನ್ಡಿಟಿವಿಗೆ ತಿಳಿಸಿದ್ದಾರೆ.
"ನಾನು ಬಿಜೆಪಿಯಿಂದ ಬಂದಿದ್ದೇನೆ. ನಮಗೆ ಭಾರತೀಯ ಜನತಾ ಯುವ ಮೋರ್ಚಾ ಎಂಬ ಯುವ ಘಟಕವಿದೆ. ನಮ್ಮ ಪಕ್ಷದಲ್ಲಿ ನಮಗೆ ಅಪಾರ ಯುವ ಅನುಯಾಯಿಗಳಿದ್ದಾರೆ, ಅದು ಪ್ರಧಾನಿ ಮೋದಿ ಅವರೊಂದಿಗೆ, ಕೇಂದ್ರ ಸರ್ಕಾರದೊಂದಿಗೆ ಇದೆ" ಎಂದು ರಾಮ್ ಮಾಧವ್ ಗುರುವಾರ ಕಠ್ಮಂಡುವಿನಲ್ಲಿ ನಡೆದ ಎನ್ಡಿಟಿವಿ ವರ್ಲ್ಡ್ನ 'ಅನ್ವಿಕ್ಷಾ' ಭಾರತ-ನೇಪಾಳ ಸಂವಾದದಲ್ಲಿ ಹೇಳಿದರು.
"ಬಿಜೆಪಿಯ ಹೊರಗೆ, ದೇಶದ ಅತ್ಯಂತ ಶಕ್ತಿಶಾಲಿ ಯುವ ಸಂಘಟನೆಯಾದ ಆರ್ಎಸ್ಎಸ್ ಇದೆ. ಜೆನ್ ಝೀಗಳೆಂದು ಎಂದು ಕರೆಯಲ್ಪಡುವವರು ಆರ್ಎಸ್ಎಸ್ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಲ್ಲಿಯೂ ಈ ಸಂಖ್ಯೆ ಬಹಳ ದೊಡ್ಡದಿದೆ ಎಂದು ರಾಮ್ ಮಾಧವ್ ಹೇಳಿದರು, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರಿಗೆ ಮಾತ್ರ ಜೆನ್ ಝೀಗಳು ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದರು.
ಆನ್ಲೈನ್ ಕಾಕ್ರೋಚ್ ಜನತಾ ಪಾರ್ಟಿ ಅಥವಾ ಸಿಜೆಪಿ ನೇತೃತ್ವದ ಪ್ರತಿಭಟನೆಗಳು ನವದೆಹಲಿಯಿಂದ ದೇಶಾದ್ಯಂತ ನಗರಗಳಿಗೆ ಹರಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸಿದ್ದವು.
ಸರ್ಕಾರ ಆರಂಭದಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಬಹುದೆಂದು ವಿಶ್ವಾಸ ಹೊಂದಿತ್ತು. ಆದರೆ ಜುಲೈ 20 ರಂದು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಜನಸಮೂಹದ ಮೇಲೆ ಪೊಲೀಸ್ ಕ್ರಮವು ಹಿನ್ನಡೆಯನ್ನುಂಟುಮಾಡಿತು, ಚಳವಳಿಗೆ ಬೆಂಬಲವನ್ನು ಹೆಚ್ಚಿಸಿತು ಮತ್ತು ಪರೀಕ್ಷೆಯ ಸೋರಿಕೆಯ ಮೇಲಿನ ಕೋಪವನ್ನು ಯುವ ಹತಾಶೆಯ ವಿಶಾಲ ಅಭಿವ್ಯಕ್ತಿಯಾಗಿ ಪರಿವರ್ತಿಸಿತು. ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ವಿಭಾಗಗಳು ಪ್ರತಿಭಟನಾಕಾರರ ಹಿಂದೆ ಒಟ್ಟುಗೂಡಿದವು, ಆದರೆ ಪೊಲೀಸ್ ಕ್ರಮದ ಚಿತ್ರಗಳು ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿ ಟೀಕೆಗೆ ಗುರಿಯಾಗಿತ್ತು.
"ಭಾರತ ಬೃಹತ್ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ನಮ್ಮ ಯುವಜನರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ಅವರು ನಮ್ಮ ದೇಶದ ಇಡೀ ಯುವಕರನ್ನು ಪ್ರತಿನಿಧಿಸುವ ಒಂದು ಗುಂಪು ಮಾತ್ರವಲ್ಲ. ಖಂಡಿತವಾಗಿಯೂ ಭಾರತದ ಯಾವುದೇ ಯುವಜನರ ಗುಂಪು, ಅವರಿಗೆ ಏನಾದರೂ ಕಾಳಜಿ ಇದ್ದರೆ, ಅವರಿಗೆ ಕೆಲವು ಸಮಸ್ಯೆಗಳಿದ್ದರೆ, ಸರ್ಕಾರದೊಂದಿಗೆ ಹೇಳಬಹುದು. ಸರ್ಕಾರ ಯಾವಾಗಲೂ ಅವರೊಂದಿಗೆ ತೊಡಗಿಸಿಕೊಳ್ಳಲು ಸಿದ್ಧರಿರುತ್ತದೆ ಮತ್ತು ಕಳೆದ ತಿಂಗಳು ದೆಹಲಿಯಲ್ಲಿ ನಡೆದದ್ದು ಅದೇ" ಎಂದು ರಾಮ್ ಮಾಧವ್ ಪ್ರತಿಭಟನೆಗಳ ಬಗ್ಗೆ ಮಾತನಾಡುತ್ತಾ ಹೇಳಿದರು.
ಜೆನ್ ಝೀಗಳನ್ನು ಉಲ್ಲೇಖಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಉಪಾಧ್ಯಕ್ಷರು ಒತ್ತಾಯಿಸಿದರು. "ಜೆನ್ ಝೀಗಳು, ಜೆನ್ ಆಲ್ಫಾ, ಮಿಲೇನಿಯಲ್ಸ್ ಪ್ರಚಲಿತಕ್ಕೆ ಬರುತ್ತಿರುವ ಈ ಹೊಸ ಪರಿಭಾಷೆಯ ಬಗ್ಗೆ ನಾವು ಸ್ವಲ್ಪ ಜಾಗರೂಕರಾಗಿರಬೇಕು. ನಮ್ಮ ಯುವಕರನ್ನು ನೀವು ಎಷ್ಟು ವಿಭಜಿಸಲು ಬಯಸುತ್ತೀರಿ?" ಎಂದು ರಾಮ್ ಮಾಧವ್ ಪ್ರಶ್ನಿಸಿದ್ದಾರೆ.
ಸರ್ಕಾರ ಬದಲಾವಣೆಗೆ ಕಾರಣವಾದ ನೇಪಾಳದಲ್ಲಿ ಜೆನ್ ಝೀ ನೇತೃತ್ವದ ಚಳುವಳಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನಡುವೆ ಸಾಮ್ಯತೆ ಇರುವುದರ ಬಗ್ಗೆ ಮಾತನಾಡಲು ಬಿಜೆಪಿ ನಾಯಕ ನಿರಾಕರಿಸಿದರು.
"ಎರಡು ವಿಭಿನ್ನ ಸನ್ನಿವೇಶಗಳು, ಎರಡು ವಿಭಿನ್ನ ಫಲಿತಾಂಶಗಳು, ನಮಗೆ ತಿಳಿದಿದೆ. ಕಳೆದ ವರ್ಷ ಈ ದೇಶದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿ ಇತ್ತು, ಅದು ಆ ಬೃಹತ್ ಜನಪ್ರಿಯ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಅದು ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಯಿತು. ಇದು ನೇಪಾಳದ ಸಂಪೂರ್ಣ ದೇಶೀಯ ವಿಷಯ. ಹೊರಗಿನಿಂದ ನೋಡಿದರೆ, ನಾವು ಅದರ ಬಗ್ಗೆ ಪ್ರತಿಕ್ರಿಯಿಸಬಾರದು. ನೇಪಾಳದ ಜನರು ಅಥವಾ ನೇಪಾಳದ ಯುವಕರು ತೆಗೆದುಕೊಂಡ ಯಾವುದೇ ನಿರ್ಧಾರವು ಅವರ ದೇಶದ ಹಿತಾಸಕ್ತಿಗಾಗಿ ಮತ್ತು ಅವರ ಹಕ್ಕು ಕೂಡ ಆಗಿದೆ" ಎಂದು ಅವರು ಹೇಳಿದರು. ದೆಹಲಿಯಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗಿದೆ ಎಂದು ರಾಮ್ ಮಾಧವ್ ಇದೇ ವೇಳೆ ಹೇಳಿದರು.