ರೇವಾ: ಹೆರಿಗೆಗೆ ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಗಾಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಿದ್ದು ಮೃತ ಮಹಿಳೆಯನ್ನು ರೇವಾ ಜಿಲ್ಲೆಯ ಹತ್ವಾ ಗ್ರಾಮದ ನಿವಾಸಿ ಕಲ್ಪನಾ ಮಿಶ್ರಾ ಎಂದು ಗುರುತಿಸಲಾಗಿದೆ.
ಆಕೆಯೊಂದಿಗೆ ಇನ್ನೂ ಜನಿಸದ ಆಕೆಯ ಮಗು ಕೂಡ ದಾರುಣ ಸಾವನ್ನಪ್ಪಿದೆ. ಕಲ್ಪನಾ ಅವರು ಆಗಸ್ಟ್ 26ರ ಮುಂಜಾನೆ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದೇ ದಿನ ರಾತ್ರಿ 11.55ಕ್ಕೆ ಅವರು ಹಾಗೂ ಅವರ ಗರ್ಭದಲ್ಲಿದ್ದ ಮಗು ಮೃತಪಟ್ಟಿದ್ದಾರೆ.
ಆಪರೇಷನ್ ಥಿಯೇಟರ್ಗೆ ಕರೆದೊಯ್ದ ಬಳಿಕ ನೀಡಲಾದ ಅನೆಸ್ತೇಷಿಯಾ ಡೋಸ್ ಹೆಚ್ಚಾದ ಕಾರಣ ಅಥವಾ ರಕ್ತ ವರ್ಗಾವಣೆಯಲ್ಲಿ ಲೋಪವಾದ ಕಾರಣ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಅಪ್ಪಾ.. ಪ್ಲೀಸ್ ನನ್ನ ಕರ್ಕೊಂಡು ಹೋಗು, ನನ್ನ ಸಾಯಿಸಿಬಿಡ್ತಾರೆ ಎಂದಿದ್ದ ಪುತ್ರಿ
ಇನ್ನು ಆಪರೇಷನ್ ಥಿಯೇಟರ್ ಗೆ ಹೋಗುವ ಮುನ್ನ ಕಲ್ಪನಾ ಅವರು ತಮ್ಮ ತಂದೆಗೆ ಮನೆಗೆ ಕರೆದೊಯ್ಯುವಂತೆ ಗೋಗರೆದಿದ್ದರು.
'ಅಪ್ಪಾ.. ನನ್ನ ಇಲ್ಲಿಂದ ಕರ್ಕೊಂಡು ಹೋಗು, ಇವ್ರು ನನ್ನನ್ನ ಸಾಯಿಸಿಬಿಡ್ತಾರೆ!" ಎಂದು ತುಂಬು ಗರ್ಭಿಣಿ ಕಲ್ಪನಾ ತಮ್ಮ ತಂದೆ ಹಾಗೂ ಕುಟುಂಬಸ್ಥರೊಂದಿಗೆ ಕೇಳಿಕೊಂಡಿದ್ದರು. ಆದರೆ ಆಕೆಯ ಭಯವೇ ನಿಜವಾಗಿತ್ತು. ಆಪರೇಷನ್ ಥಿಯೇಟರ್ ಗೆ ಹೋದ ಕಲ್ಪನಾ ಮಿಶ್ರಾ ಮತ್ತು ಆಕೆಯ ಇನ್ನೂ ಜನಿಸದ ಮಗು ಇಬ್ಬರೂ ಸಾವನ್ನಪ್ಪಿದ್ದರು.
ಅನಸ್ತೇಷಿಯಾ ಎಡವಟ್ಟು, ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ
ಆಸ್ಪತ್ರೆಯಲ್ಲಿ ಚಿಕಿತ್ಸಾ ಲೋಪ ಮತ್ತು ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ನವಜಾತ ಶಿಶು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಪರೇಷನ್ ಗೂ ಮುನ್ನ ಕಲ್ಪನಾಗೆ ಕೊಟ್ಟಿದ್ದ ಅನಸ್ತೇಷಿಯಾ ಓವರ್ ಡೋಸ್ ನಿಂದಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಥಿಯೇಟರ್ಗೆ ಕರೆದೊಯ್ದ ಬಳಿಕ ನೀಡಲಾದ ಅನೆಸ್ತೇಷಿಯಾ ಡೋಸ್ ಹೆಚ್ಚಾದ ಕಾರಣ ಅಥವಾ ರಕ್ತ ವರ್ಗಾವಣೆಯಲ್ಲಿ ಲೋಪವಾದ ಕಾರಣ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ
ಆಸ್ಪತ್ರೆಯ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದರು.
ಇಬ್ಬರು ವೈದ್ಯರು ಸೇರಿ ಹಲವರ ಅಮಾನತು
ಇನ್ನು ಇಬ್ಬರು ಹಿರಿಯ ವೈದ್ಯರು ಸೇರಿದಂತೆ ಕರ್ತವ್ಯದಲ್ಲಿದ್ದ ಇಬ್ಬರು ನರ್ಸ್ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚಿಸಲಾಗಿದ್ದು, ಪೋಸ್ಟ್ಮಾರ್ಟಂ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಪ್ರಾಥಮಿಕ ವಿಚಾರಣೆಯ ಬಳಿಕ, ಕರ್ತವ್ಯದಲ್ಲಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯೆ ಡಾ. ಸೋನಲ್ ಅಗರ್ವಾಲ್ ಹಾಗೂ ಅರಿವಳಿಕೆ (ಅನಸ್ತೀಷಿಯಾ) ವಿಭಾಗದ ಡಾ. ನಿಧಿ ಪಾಂಡೆ ಅವರನ್ನು ಮೇಲ್ನೋಟಕ್ಕೆ ಕಂಡುಬಂದ ನಿರ್ಲಕ್ಷ್ಯ ಮತ್ತು ಶಿಸ್ತು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಆಸ್ಪತ್ರೆ ಹೇಳಿದ್ದೇನು?
ವೈದ್ಯಕೀಯ ದಾಖಲೆಗಳ ಪ್ರಕಾರ, ಕಲ್ಪನಾ ಅವರ ಪ್ಲೇಟ್ಲೆಟ್ಗಳ ಸಂಖ್ಯೆ ಪ್ರತಿ ಮೈಕ್ರೋಲೀಟರ್ಗೆ ಸುಮಾರು 30,000ಕ್ಕೆ ಇಳಿದಿತ್ತು. ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ ಇದು ತೀವ್ರವಾಗಿ ಕಡಿಮೆ ಪ್ರಮಾಣವಾಗಿದೆ. ಅಲ್ಲದೆ, ಅವರ ರಕ್ತದೊತ್ತಡ ಅಪಾಯಕಾರಿಯಾಗಿ ಹೆಚ್ಚಾಗಿತ್ತು ಹಾಗೂ ಲಿವರ್ ಎಂಜೈಮ್ಗಳ ಮಟ್ಟವೂ ಏರಿಕೆಯಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.