ಪಶ್ಚಿಮ ಗೋದಾವರಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ದಂಪತಿಗಳು ತಮ್ಮ ಮೂರು ವರ್ಷದ ಮಗುವನ್ನು ಬಿಟ್ಟು ಸೇತುವೆಯಿಂದ ಗೋದಾವರಿ ನದಿಗೆ ಹಾರಿದ್ದು, ಮಗು ಅನಾಥವಾಗಿದೆ.
ನದಿಗೆ ಹಾರಿದ ದಂಪತಿಯನ್ನು ವೆಲ್ಪುರು ಗ್ರಾಮದ ನಿವಾಸಿಗಳಾದ ದೊಡ್ಡ ಸಾಯಿ(29) ಮತ್ತು ಅವರ ಪತ್ನಿ ಶಿರೀಶ್ (28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ದಂಪತಿಗಳು ತಮ್ಮ ಮೂರು ವರ್ಷದ ಮಗುವಿನೊಂದಿಗೆ ರಾತ್ರಿ 10 ಗಂಟೆಯ ಸುಮಾರಿಗೆ ಸ್ಕೂಟರ್ನಲ್ಲಿ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ಆಗಮಿಸಿದ್ದಾರೆ. ಬಳಿಕ ಮಗುವನ್ನು ಸ್ಕೂಟರ್ ಬಳಿ ಬಿಟ್ಟು ಗೋದಾವರಿ ನದಿಗೆ ಹಾರಿದ್ದಾರೆ.
ಕತ್ತಲು ಹಾಗೂ ಚಳಿ ಮಧ್ಯೆ ಮಗು ಒಂಟಿಯಾಗಿ ಸೇತುವೆ ಮೇಲೆ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗು ಅಮ್ಮ, ಅಪ್ಪ ಎಂದು ಕರೆಯುತ್ತಿರುವುದನ್ನು ಕೇಳಿ ಸ್ಥಳೀಯರು ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸ್ಕೂಟರ್ ಅನ್ನು ಜಪ್ತಿ ಮಾಡಿದ್ದಾರೆ. ಬಳಿಕ ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ಸದ್ಯ ದಂಪತಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸ್ ಸಿಬ್ಬಂದಿ, ಈಜುಗಾರರು ಮತ್ತು ದೋಣಿ ತಂಡಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.