ನವದೆಹಲಿ: ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ "ಅನಿರೀಕ್ಷಿತ ಕೃತ್ಯ" ನಡೆಸಲು ಯೋಜಿಸುತ್ತಿದ್ದಾರೆ ಎಂಬ "ಸ್ಪಷ್ಟ ಮಾಹಿತಿ" ತಮ್ಮಲ್ಲಿದೆ ಎಂದು ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸ್ಫೋಟ ಆರೋಪ ಮಾಡಿದ್ದಾರೆ.
ಸಂಪ್ರದಾಯದಂತೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿತ್ತು. ಕಾಂಗ್ರೆಸ್ ಸಂಸದರು ಮೋದಿ ಅವರ ಆಸೀನದ ಬಳಿ 'ಅನಿರೀಕ್ಷಿತ ಕೃತ್ಯ' ಎಸಗಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ನನಗೆ ಲಭಿಸಿತ್ತು. ಹೀಗಾಗಿ ನಾನೇ ಅವರಿಗೆ ಸದನಕ್ಕೆ ಹಾಜರಾಗದಂತೆ ಸಲಹೆ ನೀಡಿದ್ದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಅಚ್ಚರಿಯ ಆರೋಪ ಮಾಡಿದ್ದಾರೆ.
ಲೋಕಸಭೆ ಕಲಾಪಕ್ಕೆ ಹಾಜರಾಗದಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ ಸ್ಪೀಕರ್, ಅಂತಹ ಘಟನೆ ನಡೆದಿದ್ದರೆ, ಅದು ದೇಶದ ಪ್ರಜಾಪ್ರಭುತ್ವ ಪರಂಪರೆಗೆ ಕಪ್ಪುಚುಕ್ಕೆಯಾಗುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿಯೇ ನಾನು ಈ ನಿರ್ಧಾರಕ್ಕೆ ಬಂದೆ ಎಂದು ಸ್ಪೀಕರ್ ಹೇಳಿದ್ದಾರೆ.
ಆದರೆ ಈ ಆರೋಪವನ್ನು ಕಾಂಗ್ರೆಸ್ ಸ್ಪಷ್ಟವಾಗಿ ನಿರಾಕರಿಸಿದ್ದು. ಸರ್ಕಾರವು ವಿರೋಧ ಪಕ್ಷದ ಬಗ್ಗೆ ತಪ್ಪು ಕಲ್ಪನೆ ಬರುವಂತೆ ವರದಿಗಳನ್ನು ಹಬ್ಬಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ.
ಪ್ರತಿಭಟನೆಗಳಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟ ನಂತರ, ಮಧ್ಯಾಹ್ನ 3 ಗಂಟೆಗೆ ಸದನ ಮತ್ತೆ ಸೇರಿದ ನಂತರ ಮಾತನಾಡಿದ ಸ್ಪೀಕರ್, ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಬುಧವಾರ ಸದನದಲ್ಲಿ ಅವರ ನಡವಳಿಕೆ ಸದನಕ್ಕೆ "ಕಪ್ಪು ಚುಕ್ಕೆ" ಎಂದು ಕಿಡಿ ಕಾರಿದರು.
"ಇತಿಹಾಸದಲ್ಲಿ ಎಂದಿಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸದನಕ್ಕೆ ಎಳೆದು ತಂದಿಲ್ಲ. ಸ್ಪೀಕರ್ ಕಚೇರಿಯಲ್ಲಿ ವಿರೋಧ ಪಕ್ಷದ ಸದಸ್ಯರ ನಡವಳಿಕೆ ಸೂಕ್ತವಲ್ಲ ಮತ್ತು ವಾಸ್ತವವಾಗಿ ಅದು ಕಪ್ಪು ಚುಕ್ಕೆಯಂತೆ ಇತ್ತು" ಎಂದು ಅವರು ಹೇಳಿದರು.