ರಾಂಚಿ: ಜಾರ್ಖಂಡ್ ನ ದುಮ್ಕಾದ ಜರ್ಮುಂಡಿ ಬಾಲಕಿಯರ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಸರಸ್ವತಿ ಪೂಜೆಗೆ 100 ರೂ. ದೇಣಿಗೆ ತರದ ಕಾರಣ ಅವರಿಗೆ 100 ಸಿಟ್-ಅಪ್ಗಳ ಶಿಕ್ಷೆ ನೀಡಲಾಗಿದೆ ಮತ್ತು ಮಧ್ಯಾಹ್ನದ ಊಟ ನಿರಾಕರಿಸಿದ ಆಘಾತಕಾರಿ ಘಟನೆ ನಡೆದಿದೆ.
ಈ ಸಂಬಂಧ ಕೆಲವು ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲಾ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಅಧಿಕೃತ ದೂರು ನೀಡಿದ್ದಾರೆ.
ಜರ್ಮುಂಡಿ ಬಾಲಕಿಯರ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಸರಸ್ವತಿ ಪೂಜೆಗೆ ಪ್ರತಿ ವಿದ್ಯಾರ್ಥಿನಿಯಿಂದ 100 ರೂ. ಕೇಳಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಪೂಜೆಯ ನಂತರ ಹಣವನ್ನು ತರದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗಿದೆ ಮತ್ತು ಶಾಲೆಗೆ ಬರದಂತೆ ತಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಪ್ರಕಾರ, ಮುಖ್ಯೋಪಾಧ್ಯಾಯರು ಮನೆಯಿಂದ ಹಣ ತರುವಂತೆ ಸೂಚಿಸಿದ್ದಾರೆ. ಹಣ ತರಲು ಸಾಧ್ಯವಾಗದವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸರಸ್ವತಿ ಪೂಜೆಗೆ 100 ರೂ. ತರಲು ಹೇಳಿದ್ದರು, ಆದರೆ ನನಗೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಖ್ಯೋಪಾಧ್ಯಾಯರು ಪೂಜೆಯ ನಂತರ 100 ಸಿಟ್-ಅಪ್ಗಳನ್ನು ಮಾಡುವಂತೆ ಸೂಚಿಸಿದರು ಮತ್ತು ಮಧ್ಯಾಹ್ನದ ಊಟವನ್ನು ನಿರಾಕರಿಸಿದರು 7ನೇ ತರಗತಿಯ ವಿದ್ಯಾರ್ಥಿನಿ ನೀತು ಕುಮಾರಿ ಹೇಳಿದ್ದಾರೆ.
ಖಾಲಿ ಹೊಟ್ಟೆಯಲ್ಲಿ 100 ಸಿಟ್-ಅಪ್ಗಳನ್ನು ಮಾಡಿದ ನಂತರ ನನಗೆ ಅನಾರೋಗ್ಯ ಕಾಣಿಸಿಕೊಂಡಿತು. ಹೀಗಾಗಿ ಮನೆಗೆ ಹೋಗಲು ಅನುಮತಿ ಕೇಳಿದೆ. ಆದರೆ ಹೊರಗೆ ಹೋಗಲು ಬಿಡಲಿಲ್ಲ ಮತ್ತು ಪೂಜೆ ಮುಗಿಯುವವರೆಗೂ ಶಾಲೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಯಿತು ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ನೀತು ಕುಮಾರಿ ಸಂಜೆ ಮನೆಗೆ ಹಿಂದಿರುಗಿದ ನಂತರ, ತಮ್ಮ ತಾಯಿ ರೀತಾ ದೇವಿಗೆ ಘಟನೆಯನ್ನು ವಿವರಿಸಿದ್ದಾರೆ. ಶಾಲೆಯಲ್ಲಿ ಸಿಟ್-ಅಪ್ಗಳನ್ನು ಮಾಡಿದ ನಂತರ ಮಗಳು ಕಾಲುಗಳಲ್ಲಿ ತೀವ್ರ ನೋವು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವುದನ್ನು ನೋಡಿ ಅವರು ಆಘಾತಗೊಂಡಿದ್ದಾರೆ.
ಜೂಲಿ ಕುಮಾರಿ, ಶಿವಾಂಗಿ ಕುಮಾರಿ, ರೋಶನ್ ಕುಮಾರ್, ಅಮನ್ ಕುಮಾರ್, ಅನ್ನು ಕುಮಾರಿ, ರಾಜು ಕುಮಾರ್ ಮತ್ತು ಸೋಹನ್ ಕುಮಾರ್ ಸೇರಿದಂತೆ ಇತರ ವಿದ್ಯಾರ್ಥಿಗಳು ಸಹ ಮುಖ್ಯೋಪಾಧ್ಯಾಯರು ಮನೆಯಿಂದ ಹಣ ತರಲು ಹೇಳಿದ್ದಾರೆ. ಆದರೆ ಹಣ ತರಲು ವಿಫಲವಾದಾಗ, ಮುಖ್ಯೋಪಾಧ್ಯಾಯ ಧನಂಜಯ್ ಅವರು ಶಾಲೆಗೆ ಬರಬೇಡಿ ಎಂದು ಎಚ್ಚರಿಸಿರುವುದಾಗಿ ಆರೋಪಿಸಿದ್ದಾರೆ.
ಈ ಸಂಬಂಧ ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ದುಮ್ಕಾ ಉಪ ಆಯುಕ್ತ ಅಭಿಜೀತ್ ಸಿನ್ಹಾ ಅವರು ಹೇಳಿದ್ದಾರೆ. ಆದಾಗ್ಯೂ, ಈ ವಿಷಯದ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಗಳನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.