ನವದೆಹಲಿ: ಅತ್ಯಾಚಾರ ಮತ್ತು ಮದುವೆ ಭರವಸೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ ವಿವಾಹ ಪೂರ್ವ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಕಠಿಣವಾದ ಎಚ್ಚರಿಕೆ ನೀಡಿದೆ.
ಈಗಾಗಲೇ ಎರಡನೇ ಮದುವೆಯಾಗಿದ್ದರೂ, ಮತ್ತೋರ್ವ ಮಹಿಳೆಯನ್ನು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ.
ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಹುಶಃ ನಾವು ಹಳೆಯ ಫ್ಯಾಶನ್ನಿನವರಾಗಿರಬಹುದು. ಆದರೆ ಮದುವೆಗೆ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರು. ಅವರ ಸಂಬಂಧ ಏನೇ ಇರಲಿ, ಮದುವೆಗೂ ಮುನ್ನ ಅವರು ಹೇಗೆ ದೈಹಿಕ ಸಂಬಂಧದಲ್ಲಿ ಇರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದರು.
ನೀವು ತುಂಬಾ ಜಾಗರೂಕರಾಗಿರಬೇಕು. ಮದುವೆಗೆ ಮೊದಲು ಯಾರೂ ಯಾರನ್ನೂ ನಂಬಬಾರದು. 2022 ರಲ್ಲಿ ಮ್ಯಾಟ್ರಿಮೋನಿಯಲ್ ಸೇವೆಗಳ ವೆಬ್ಸೈಟ್ ಮೂಲಕ ಮಹಿಳೆ ಮತ್ತು ಪುರುಷ ಭೇಟಿಯಾದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಪುರುಷ ಮಹಿಳೆಗೆ ತಾನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಮಹಿಳೆ ದುಬೈನಲ್ಲಿ ಭೇಟಿಯಾದಾಗ ದೈಹಿಕ ಸಂಬಂಧ ಹೊಂದಿರುವುದಾಗಿ ಪ್ರಾಸಿಕ್ಯೂಷನ್ ಆರೋಪಿಸಿದರು. ಮಹಿಳೆಯ ಅನುಮತಿ ಇಲ್ಲದೆ ಅವರು ಸೆಕ್ಸ್ ನಲ್ಲಿ ತೊಡಗಿರುವ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿದರು.
ಈಗಾಗಲೇ ಒಂದು ಬಾರಿ ಮದುವೆಯಾಗಿದ್ದ ಪುರುಷ ತದನಂತರ ಪಂಜಾಬ್ ನಲ್ಲಿ 2024ರಲ್ಲಿ ಜನವರಿಯಲ್ಲಿ ಎರಡನೇ ಮದುವೆಯಾಗಿದ್ದಾರೆ. ಮದುವೆಗೂ ಮುನ್ನಾ ಯುವತಿ ದುಬೈಗೆ ಹೋದದ್ದು ಯಾಕೆ ಎಂದು ನಾಗರತ್ನ ಪ್ರಶ್ನಿಸಿದರು.