ಮುಂಬಯಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಹತ್ತು ತಿಂಗಳು ಕಳೆದರೂ ದುರಂತದಲ್ಲಿ ಮೃತಪಟ್ಟ ಸಂತೋಷ್ ಜಗದಾಳೆ ಪುತ್ರಿಗೆ ಮಹಾರಾಷ್ಟ್ರ ಸರ್ಕಾರ ನೀಡಿದ್ಧ ಭರವಸೆ ಇನ್ನೂ ಈಡೇರಿಸಿಲ್ಲ.
ಸಂತೋಷ್ ಜಗದಾಳೆ ಮತ್ತು ಮಹಾರಾಷ್ಟ್ರದ ಇತರ ಆರು ಮಂದಿ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರು. ರಾಜ್ಯ ಸರ್ಕಾರವು ಮೃತರ ಸಂಬಂಧಿಕರಿಗೆ ಆರ್ಥಿಕ ನೆರವು ಮತ್ತು ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಜಗದಾಳೆ ಕುಟುಂಬ ಭೇಟಿ ಮಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭರವಸೆ ನೀಡಿದಂತೆ ಇನ್ನೂ ರಾಜ್ಯ ಸೇವೆಗೆ ಸೇರಿಸಿಕೊಳ್ಳಲಾಗಿಲ್ಲ.
ದಾಳಿಯ ಸ್ವಲ್ಪ ಸಮಯದ ನಂತರ ಕೇಂದ್ರ ಸಚಿವ ಅಮಿತ್ ಶಾ ಕೂಡ ತಮ್ಮ ಕುಟುಂಬವನ್ನು ಭೇಟಿ ಮಾಡಿದ್ದರು. ಸರ್ಕಾರಿ ಉದ್ಯೋಗ, ಶೌರ್ಯ ಪ್ರಶಸ್ತಿ ಮತ್ತು ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಸ್ಮಾರಕ ಸೇರಿದಂತೆ ಎಲ್ಲಾ ಸಂಭಾವ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅಸವಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ ಕೂಡ ತಮ್ಮ ಕುಟುಂಬವನ್ನು ಭೇಟಿ ಮಾಡಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. "ಅವರ ಸೂಚನೆಯ ಮೇರೆಗೆ, ನಾವು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ಭೇಟಿ ನೀಡಿ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಅವರು ಕೆಲಸದ ಲಭ್ಯತೆಯನ್ನು ಪರಿಶೀಲಿಸಿದ್ದು , 2ನೇ ದರ್ಜೆಯ ಹುದ್ದೆಗಳು ಖಾಲಿ ಇವೆ ಮತ್ತು ಅವು ನನ್ನ ಶಿಕ್ಷಣಕ್ಕೂ ಸೂಕ್ತವಾಗಿವೆ ಎಂದು ಅವರು ಹೇಳಿದರು.
ನನ್ನ ಫೈಲ್ ಅನ್ನು ಏಪ್ರಿಲ್ 2025 ರಲ್ಲಿ ಅನುಮೋದನೆಗಾಗಿ ಸಚಿವಾಲಯಕ್ಕೆ ಕಳುಹಿಸಿದೆ, ಆದರೆ ಹತ್ತು ತಿಂಗಳ ನಂತರವೂ ಅವರ ನೌಕರಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸವರಿ ಹೇಳಿದರು. ಅಸವರಿ ಬಿ ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆ ಮತ್ತು ಎಂಬಿಎ ಪದವಿ ಪಡೆದಿದ್ದಾರೆ. ಅವರು ಖಾಸಗಿ ಸಂಸ್ಥೆಯಲ್ಲಿ ಎಚ್ ಆರ್ ಹೆಡ್ ಆಗಿ ಸೇವೆ ಸಲ್ಲಿಸಿದ್ದಾರೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಎನ್ಸಿಪಿ ಎಸ್ಪಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ, ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ವೈಯಕ್ತಿಕ ಭರವಸೆ ಮತ್ತು ಅಸಾವರಿ ಅವರ ಉನ್ನತ ಶೈಕ್ಷಣಿಕ ಅರ್ಹತೆಗಳ ಹೊರತಾಗಿಯೂ, ಆಡಳಿತ ಪ್ರಕ್ರಿಯೆಯು ಹತ್ತು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿರುವುದಕ್ಕೆ "ಆಶ್ಚರ್ಯ ಮತ್ತು ತೀವ್ರ ವಿಷಾದ" ವ್ಯಕ್ತಪಡಿಸಿದ್ದಾರೆ. ಜಗದಾಳೆ ಕುಟುಂಬವು ಪ್ರಸ್ತುತ ತೀವ್ರ ಆರ್ಥಿಕ ಮತ್ತು ಭಾವನಾತ್ಮಕ ಸಂಕಷ್ಟವನ್ನು ಎದುರಿಸುತ್ತಿದೆ, ಏಕೆಂದರೆ ಸಂತೋಷ್ ಮನೆಯ ಏಕೈಕ ಜೀವನಾಧಾರರಾಗಿದ್ದರು ಎಂದು ಸುಳೆ ಹೇಳಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ರಾಜಕೀಯ ನಾಯಕರು ಆರಂಭದಲ್ಲಿ ಬೆಂಬಲ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಕುಟುಂಬವು ನ್ಯಾಯಕ್ಕಾಗಿ "ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಿದೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಬಗ್ಗೆ ಸರ್ಕಾರ ಖಂಡಿತವಾಗಿಯೂ ಇಷ್ಟೊಂದು ನಿರ್ಲಕ್ಷ್ಯ ತೋರಬಾರದು ಎಂದು ಅವರು ಹೇಳಿದರು.