ದೆಹಲಿ‌ನಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026 ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಗೂಗಲ್ ಸಿಇಒ ಸುಂದರ್ ಪಿಚೈ, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಇತರ ತಂತ್ರಜ್ಞಾನ ನಾಯಕರೊಂದಿಗೆ ಕೈಜೋಡಿಸಿದರು. 
ದೇಶ

AI ಭಾರತದ ಭವಿಷ್ಯ, ಅದಕ್ಕೆ ಮುಕ್ತ ಅವಕಾಶ ಕೊಡಿ, ನಿಯಂತ್ರಣ ನಮ್ಮ ಕೈಯಲ್ಲಿರಲಿ, ಮಕ್ಕಳ ಸುರಕ್ಷತೆಯಿರಲಿ: ಪ್ರಧಾನಿ ಮೋದಿ-Video

ಭಾರತದ ‘ಮಾನವ (MANAV) ವಿಷನ್’ ನ್ನು ಅನಾವರಣಗೊಳಿಸಿದರು. ಈ ವಿಷನ್ ನಲ್ಲಿ ನೈತಿಕ ಮತ್ತು ನೀತಿಪರ ವ್ಯವಸ್ಥೆಗಳು, ಹೊಣೆಗಾರ ಆಡಳಿತ ಮತ್ತು ರಾಷ್ಟ್ರೀಯ ಸ್ವಾಯತ್ತತೆ ಒಳಗೊಂಡಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗುರುವಾರ ದೆಹಲಿಯಲ್ಲಿ AI Impact Summit ಉದ್ದೇಶಿಸಿ ಮಾತನಾಡಿದರು. ಕೃತಕ ಬುದ್ಧಿಮತ್ತೆ (AI) ಎಲ್ಲರಿಗೂ ಲಭ್ಯವಾಗುವಂತಿರಬೇಕು ಎಂದು ಹೇಳಿ, ಅದರ ಜನತಂತ್ರೀಕರಣಕ್ಕೆ ಕರೆ ನೀಡಿದರು. ಇದೇ ವೇಳೆ ಅವರು ಭಾರತದ ಎಐಗಾಗಿ ‘ಮಾನವ್ (MANAV) ವಿಷನ್’ ಅನಾವರಣಗೊಳಿಸಿದರು.

ದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ ಮಾತನಾಡಿದ ಅವರು, ಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ, ಅದನ್ನು ಮುನ್ನಡೆಸಿ ರೂಪಿಸುತ್ತಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ಮಾನವ ಇತಿಹಾಸದಲ್ಲಿ ಮಹತ್ವದ ಪರಿವರ್ತನೆಯ ಅಧ್ಯಾಯವಾಗಿದೆ. ಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ, ಅದನ್ನು ಮುನ್ನಡೆಸುತ್ತಿದೆ ಮತ್ತು ದಿಕ್ಕು ತೋರಿಸುತ್ತಿದೆ ಎಂದು ವಿಶ್ವ ನಾಯಕರು ಮತ್ತು ಪ್ರಮುಖ ಕಂಪನಿಗಳ ಸಿಇಒಗಳ ಸಮ್ಮುಖದಲ್ಲಿ ಹೇಳಿದರು.

ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗಬಾರದು. ಅದಕ್ಕಾಗಿ ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಸಾಧನವಾಗಬೇಕು ಎಂದು ಪ್ರಧಾನಿ ಹೇಳಿದರು.

ಏನಿದು MANAV Vision:

  • A – ಹೊಣೆಗಾರ ಆಡಳಿತ (Accountable Governance): ಪಾರದರ್ಶಕ ನಿಯಮಗಳು ಮತ್ತು ಬಲವಾದ ಮೇಲ್ವಿಚಾರಣೆ ಇರಬೇಕು.

    N – ರಾಷ್ಟ್ರೀಯ ಸ್ವಾಯತ್ತತೆ (National Sovereignty): ಯಾರ ಡೇಟಾ, ಅವರ ಹಕ್ಕು.

    A – ಸುಲಭ ಲಭ್ಯ ಮತ್ತು ಸಮಾವೇಶಾತ್ಮಕ (Accessible and Inclusive): ಎಐ ಎಲ್ಲರಿಗೂ ಲಭ್ಯವಾಗುವಂತಿರಬೇಕು; ಅದು ಏಕಾಧಿಪತ್ಯವಾಗದೆ, ಬಹುಜನರಿಗೆ ಉಪಯೋಗವಾಗುವಂತಿರಬೇಕು.

    V – ಮಾನ್ಯ ಮತ್ತು ಕಾನೂನುಬದ್ಧ (Valid and Legitimate): ಎಐ ಕಾನೂನುಬದ್ಧವಾಗಿದ್ದು, ಪರಿಶೀಲಿಸಬಹುದಾದಂತಿರಬೇಕು.

ಈ ಮಾನವ್ ವಿಷನ್ 21ನೇ ಶತಮಾನದ ಎಐ ಆಧಾರಿತ ವಿಶ್ವದಲ್ಲಿ ಮಾನವ ಕಲ್ಯಾಣಕ್ಕೆ ಮಹತ್ವದ ಕೊಂಡಿಯಾಗುತ್ತದೆ ಎಂದು ಮೋದಿ ಹೇಳಿದರು.

ಎಐಯನ್ನು ಜಾಗತಿಕ ಸಾಮೂಹಿಕ ಸಂಪತ್ತಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದ ಅವರು, ಎಐಗೆ ಮುಕ್ತವಾದ ಅವಕಾಶ ನೀಡಬೇಕು, ಆದರೆ ನಿಯಂತ್ರಣ ಮಾನವರ ಕೈಯಲ್ಲಿರಬೇಕು ಎಂದು ಒತ್ತಿಹೇಳಿದರು.

ಹೊಸ ತಂತ್ರಜ್ಞಾನಗಳ ಬಗ್ಗೆ ಕೆಲವರಿಗೆ ಆತಂಕವಿದ್ದರೂ, ಯುವಜನತೆ ಎಐಯನ್ನು ಅಪಾರ ಉತ್ಸಾಹದಿಂದ ಸ್ವೀಕರಿಸುತ್ತಿರುವುದು ಗಮನಾರ್ಹ ಎಂದರು.

ಮಾನವ ಇತಿಹಾಸದಲ್ಲಿ ಕೆಲವು ತಿರುವುಗಳು ಶತಮಾನಗಳ ದಿಕ್ಕನ್ನೇ ಬದಲಿಸಿವೆ. ಕೃತಕ ಬುದ್ಧಿಮತ್ತೆ ಕೂಡ ಅಂತಹ ಪರಿವರ್ತನೆಯಾಗಿದೆ ಎಂದರು.

ಎಐಯು ದೊಡ್ಡ ಶಕ್ತಿ ಆಗಿದ್ದು, ಅದನ್ನು ಜವಾಬ್ದಾರಿಯುತವಾಗಿ ಬಳಸಿದರೆ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ನೀಡಬಹುದು; ಆದರೆ ಮಾನವಕೇಂದ್ರಿತ ಗುರಿಗಳಿಂದ ದೂರವಾದರೆ ಹಾನಿಕಾರಕವಾಗಬಹುದು ಎಂದು ಕೂಡ ಎಚ್ಚರಿಕೆ ನೀಡಿದರು.

ಡೀಪ್‌ಫೇಕ್‌ಗಳು ಮತ್ತು ಕೃತಕ ವಿಷಯಗಳು ಮುಕ್ತ ಸಮಾಜಗಳಲ್ಲಿ ಅಸ್ಥಿರತೆ ಉಂಟುಮಾಡಬಹುದು ಎಂದು ಹೇಳಿ, ನವೀನತೆ ಜೊತೆಗೆ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಒತ್ತಿಹೇಳಿದರು.

ಮಾನವ ಇತಿಹಾಸದಲ್ಲಿ ಕೆಲವು ತಿರುವುಗಳು ಶತಮಾನಗಳ ದಿಕ್ಕನ್ನು ನಿರ್ಧರಿಸಿವೆ. ಅವು ನಾಗರಿಕತೆಯ ದಿಕ್ಕನ್ನು ರೂಪಿಸಿ ಅಭಿವೃದ್ಧಿಯ ವೇಗವನ್ನು ಬದಲಿಸಿವೆ. ಕೃತಕ ಬುದ್ಧಿಮತ್ತೆ ಕೂಡ ಅಂತಹ ಮಹತ್ವದ ಪರಿವರ್ತನೆಯಾಗಿದೆ ಎಂದು ಹೇಳಿದರು.

ಎಐ ಹಂಚಿಕೊಂಡಾಗ ಮಾತ್ರ ಅದರ ಪ್ರಯೋಜನ ಎಲ್ಲರಿಗೂ ಸಿಗುತ್ತದೆ. ಅದನ್ನು ಜಾಗತಿಕ ಸಾಮಾನ್ಯ ಸಂಪತ್ತಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಬೇಕು. ಎಐಗೆ ಆಕಾಶದವರೆಗೆ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು, ಆದರೆ ಅದರ ನಿಯಂತ್ರಣ ನಮ್ಮ ಕೈಯಲ್ಲಿರಬೇಕು ಎಂದರು.

ಇದೇ ವೇಳೆ, ಆಹಾರ ಪ್ಯಾಕೆಟ್‌ಗಳ ಮೇಲಿರುವ ಪೌಷ್ಟಿಕ ಲೇಬಲ್‌ಗಳ ಮಾದರಿಯಲ್ಲಿ, ಎಐ ಮೂಲಕ ಸೃಷ್ಟಿಸಲಾದ ವಿಷಯಗಳಿಗೆ ಪ್ರಾಮಾಣಿಕೀಕೃತ ಲೇಬಲ್‌ಗಳು (authenticity labels) ಇರಬೇಕು ಎಂಬುದನ್ನು ಸೂಚಿಸಿದರು.

ಭಾರತ ಮಂಟಪದಲ್ಲಿ ನಡೆದ ಈ ಸಮಿಟ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್, ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ದ ಸಿಲ್ವಾ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ, ಭೂತಾನ್ ಪ್ರಧಾನಮಂತ್ರಿ ತ್ಶೆರಿಂಗ್ ಟೋಬ್ಗೇ, ಮಾರಿಷಸ್ ಪ್ರಧಾನಮಂತ್ರಿ ನವೀಂಚಂದ್ರ ರಾಮಗೂಲಾಮ್, ಕ್ರೊಯೇಶಿಯಾ ಪ್ರಧಾನಮಂತ್ರಿ ಆಂದ್ರೇಜ್ ಪ್ಲೆಂಕೋವಿಕ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಚಿಚ್, ಸೆಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೇ, ಎಸ್ಟೋನಿಯಾ ಅಧ್ಯಕ್ಷ ಅಲಾರ್ ಕರಿಸ್ ಮತ್ತು ಫಿನ್ಲ್ಯಾಂಡ್ ಪ್ರಧಾನಮಂತ್ರಿ ಪೆಟೇರಿ ಓರ್ಪೋ ಸೇರಿದಂತೆ ಅನೇಕ ಜಾಗತಿಕ ನಾಯಕರು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಂಗೇಜ್‌ಮೆಂಟ್‌ ಮಾಡಿಕೊಂಡ ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ಚಿಲ್ಲರ್ ಮಂಜು; ಹುಡುಗಿ ಯಾರು?

ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಸೇರಿದ ಡಿಎಂಡಿಕೆ

ಹೆಂಡತಿಗೆ ಇಷ್ಟ ಬಂದಂಗೆ ಹೊಡೀಬೋದು: ಆದ್ರೆ ಮೂಳೆ ಮೂರಿಬಾರ್ದು ಅಷ್ಟೇ; ಕೌಟುಂಬಿಕ ದೌರ್ಜನ್ಯವನ್ನು ಕಾನೂನುಬದ್ಧಗೊಳಿಸಿದ ತಾಲಿಬಾನ್ !

ಆರೋಗ್ಯ ವಿಮೆ ಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳು (ಹಣಕ್ಲಾಸು)

ದಾಖಲೆ ಬೆಲೆಗೆ ಬ್ಯಾಡಗಿ ಮೆಣಸಿನಕಾಯಿ ಮಾರಾಟ: ಕ್ವಿಂಟಾಲ್‌ಗೆ 90,000 ರೂ. ತಲುಪಿದ ದರ; ರೈತರು ಸಂತಸ, ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

SCROLL FOR NEXT