ಫತೇಹ್ಪುರ್ (ಉತ್ತರ ಪ್ರದೇಶ): ಮದುವೆ ಮಂಟಪದ ಬಳಿ ಕುಳಿತಿದ್ದ ಸಾಕು ನಾಯಿಗೆ ವರ ಕಡೆಯವರು ಹೊಡೆದ ಕಾರಣಕ್ಕೆ ವಧು ಮದುವೆಯನ್ನೇ ನಿರಾಕರಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಫತೇಹ್ಪುರ್ನಲ್ಲಿ ನಡೆದಿದೆ.
ಘಟನೆ ನಂತರ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಫೆಬ್ರವರಿ 18ರಂದು ಖಾಗಾ ಕೋಟ್ವಾಲಿ ಪ್ರದೇಶದ ಕಾನ್ಹಾ ಗೆಸ್ಟ್ ಹೌಸ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮಂಗಳಸೂತ್ರ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದ ವೇಳೆ ವಧುವಿನ ಸಾಕು ನಾಯಿ ಮಂಟಪದ ಬಳಿ ಬೊಗಳಲು ಶುರು ಮಾಡಿತ್ತು. ಈ ವೇಳೆ ವರನ ಕಡೆಯವರು ನಾಯಿಗೆ ಒದ್ದಿದ್ದಾರೆ. ಇದರಿಂದ ವಧು ಆಕ್ರೋಶಗೊಂಡು ಮದುವೆಯನ್ನೇ ನಿರಾಕರಿಸಿದ್ದಾಳೆ.
ಘಟನೆ ಬಳಿಕ ಎರಡೂ ಕುಟುಂಬಗಳ ನಡುವೆ ವಾಗ್ವಾದ ತೀವ್ರಗೊಂಡಿದೆ. ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಹಲವರಿಗೆ ಗಾಯಗಳಾಗಿವೆ.
ವಧುವಿಗೂ ಬೆರಳಿನ ಮೂಳೆಗಳು ಮುರಿದಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ಸಂಧಾನಕ್ಕೆ ಯತ್ನಿಸಿದರೂ ವಧು ಮದುವೆ ಮುಂದುವರಿಸಲು ನಿರಾಕರಿಸಿದ್ದು, ಈ ವೇಳೆ ವರ ಕಣ್ಣೀರಿಡುತ್ತಾ ಮನವಿ ಮಾಡಿದರೂ ಒಪ್ಪಿಲ್ಲ ಎಂದು ತಿಳಿದುಬಂದಿದೆ.
ಬಳಿಕ ಪಂಚಾಯತ್ ಸಭೆಯೂ ನಡೆದಿದ್ದು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಬಳಿಕ ಎರಡೂ ಕುಟುಂಬಗಳು ಉಡುಗೊರೆ ಮತ್ತು ಆಭರಣಗಳನ್ನು ಹಿಂದಿರುಗಿಸಿಕೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದ ಯುವಕ ಹಾಗೂ ಯುವತಿ 2 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ತಿಂಗಳ ಹಿಂದೆ ಆರ್ಯಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ. ನಂತರ ಕುಟುಂಬಗಳ ಒಪ್ಪಿಗೆಯೊಂದಿಗೆ ಅಧಿಕೃತ ಮದುವೆ ಸಮಾರಂಭ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಎರಡೂ ಕುಟುಂಬಗಳ ನಡುವೆ ಹೊಂದಾಣಿಕೆ ಆಗಿದ್ದು ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.