ನವದೆಹಲಿ: ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕೀಳು ಮಟ್ಟದ ನಗ್ನ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿ, ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದವನ್ನು ನಾಚಿಕೆಗೇಡಿನದ್ದು ಎಂದು ಕರೆದಿದ್ದಾರೆ, ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರೇ ಅವರಿಗೇ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಈ ಕುರಿತು ವೀಡಿಯೋ ಸಂದೇಶದಲ್ಲಿ ರಾಹುಲ್ ಗಾಂಧಿ, ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ದೇಶದ ಹಿತಾಸಕ್ತಿಗಳಿಗೆ ದ್ರೋಹವಾಗಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು. ನೀವು ಅಮೆರಿಕದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದದಲ್ಲಿ ದೇಶವನ್ನು ಮಾರಿದ್ದೀರಿ. ಅದು ನಾಚಿಕೆಗೇಡಿನ ಸಂಗತಿ ಎಂದರು. ಈ ಒಪ್ಪಂದದಿಂದ ಭಾರತದ ಡೇಟಾ ಭದ್ರತೆ ಹಾನಿಗೊಳಗಾಗಿದೆ, ರೈತರು ಮತ್ತು ವಸ್ತ್ರೋದ್ಯಮಕ್ಕೂ ನಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ನಡೆದ ದೆಹಲಿಯ AI ಇಂಪ್ಯಾಕ್ಟ್ ಸಮ್ಮೇಳನದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ಮೋದಿ “ಕೀಳು ಮಟ್ಟದ ನಾಚಿಕೆಗೇಡಿನ ರಾಜಕೀಯ” ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ, “ನಾಚಿಕೆ ಬಗ್ಗೆ ನೀವು ಮಾತನಾಡುತ್ತೀರಾ? ನಾಚಿಕೆ ಎಂದರೇನು ಎಂಬುದನ್ನು ನಾನು ಹೇಳುತ್ತೇನೆ,” ಎಂದು ಹೇಳಿ, ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ ಎಂದು ಸಮರ್ಥಿಸಿದರು.
ನೀವು ದೇಶದ ಡೇಟಾವನ್ನು ಒಪ್ಪಿಸಿದ್ದೀರಿ. ರೈತರನ್ನು ನಾಶಮಾಡಿದ್ದೀರಿ. ವಸ್ತ್ರೋದ್ಯಮವನ್ನು ಹಾಳು ಮಾಡಿದ್ದೀರಿ — ಅದೇ ನಾಚಿಕೆಗೇಡಿನದ್ದು ಎಂದರು. ಪ್ರಧಾನಮಂತ್ರಿ ಭಯದಿಂದ ಸಂಸತ್ತಿಗೆ ಬರಲು ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರೇ, ನಿಮ್ಮ ಪ್ರಧಾನಮಂತ್ರಿಯ ಕಣ್ಣಿನಲ್ಲಿ ನೋಡಿ — ನಿಮಗೆ ಅವರ ಕಣ್ಣುಗಳಲ್ಲಿ ಭಯ ಕಾಣಿಸುತ್ತದೆ. ಅವರು ಸಂಸತ್ತಿಗೂ ಬರಲಿಲ್ಲ ಎಂದರು. ಅದಾನಿ ಗ್ರೂಪ್ ಅವರ ಬಗ್ಗೆ ಇರುವ ವಿವಾದ ಬಗ್ಗೆ ಕೂಡ ರಾಹುಲ್ ಗಾಂಧಿ ಮಾತನಾಡಿದರು.
ನಿಮ್ಮ ಹೆಸರು, ನಿಮ್ಮ ಸಚಿವರ ಹೆಸರು ಮತ್ತು ನಿಮ್ಮ ಸ್ನೇಹಿತರ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿಕೊಳ್ಳುವುದು — ಇಂತಹ ಗಂಭೀರ ಅಪರಾಧಿಯೊಂದಿಗೆ ಸಂಬಂಧ ಹೊಂದಿರುವುದು ನಾಚಿಕೆಗೇಡಿನದ್ದು ಎಂದರು.
ನಾನು ಸಂಸತ್ತಿನಲ್ಲಿ ಹೇಳಿದ ಸತ್ಯವೇ ಇದು — ಈ ದೇಶದ ಪ್ರಧಾನಮಂತ್ರಿಯ ಕಂಠವನ್ನು ಅಮೆರಿಕ ಹಿಡಿದಿದೆ; ಅವರು ಭಾರತವನ್ನು ಒತ್ತಡಕ್ಕೆ ಒಳಪಡಿಸಿ ಮಾರಿದ್ದಾರೆ. ಅಮೆರಿಕದಲ್ಲಿ ಅದಾನಿ ವಿರುದ್ಧ ನಡೆಯುತ್ತಿರುವ ಪ್ರಕರಣವು ಬಿಜೆಪಿ ಮತ್ತು ಅದರ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರಿರುವುದರಿಂದ ನಿಮ್ಮ ನಿದ್ದೆ ಹಾರಿಹೋಗಿದೆ ಎಂದರು.
ಈ ವಿಷಯದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಅದನ್ನು ನಾಚಿಕೆಗೇಡಿನದ್ದು ಎಂದು ಕರೆದರು. ಸರ್ಕಾರ ಕೆಲವು ಉದ್ಯಮಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿ, ವಿರೋಧ ಪಕ್ಷ ಈ ವಿಷಯವನ್ನು ಮುಂದುವರಿಸಿ ಎತ್ತಿಹಿಡಿಯಲಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಅವರನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಅಹಿಂಸೆ ಮತ್ತು ಭಿನ್ನಾಭಿಪ್ರಾಯಗಳು ಭಾರತದ ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವಾಗಿವೆ ಎಂದು ಹೇಳಿದರು. ಈ ದಾರಿ ಗಾಂಧೀಜಿ ಮತ್ತು ಭಗತ್ ಸಿಂಗ್ ತೋರಿಸಿದದ್ದು. ಇದಕ್ಕೆ ನೀವು ಏಕೆ ಭಯಪಡುತ್ತೀರಿ ಎಂದು ಪ್ರಶ್ನಿಸಿದರು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ರೈತರು, ಕಾರ್ಮಿಕರು, ಎಂಎಸ್ಎಂಇಗಳು ಮತ್ತು ಭಾರತದ ಡೇಟಾವನ್ನು ರಕ್ಷಿಸಲು ಹಾಗೂ ಸಂವಿಧಾನವನ್ನು ಕಾಪಾಡಲು ಕಾಂಗ್ರೆಸ್ ಹೋರಾಟವನ್ನು ಮುಂದುವರಿಸುತ್ತದೆ. ಭಾರತವನ್ನು ರಕ್ಷಿಸಲು ಬೇಕಾದದ್ದನ್ನೆಲ್ಲ ಮಾಡುತ್ತೇವೆ. ಒಂದು ಹೆಜ್ಜೆಯೂ ಹಿಂದಕ್ಕೆ ಹೋಗುವುದಿಲ್ಲ ಎಂದು ಪುನರುಚ್ಛರಿಸಿದರು.