ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಉಚ್ಚಾಟಿತ ಎಐಎಡಿಎಂಕೆ ನಾಯಕ ಹಾಗೂ ದಿವಂಗತ ಜಯಲಲಿತಾ ಅವರ ಮೆಚ್ಚಿನ ಶಿಷ್ಯರಾಗಿದ್ದ ಪನ್ನೀರ್ಸೆಲ್ವಂ ಶುಕ್ರವಾರ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಚೆನ್ನೈನ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಓ. ಪನ್ನೀರ್ಸೆಲ್ವಂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಬೆಳಿಗ್ಗೆಯಿಂದಲೇ ಸ್ಥಳದ ಹೊರಗೆ ಜಮಾಯಿಸಿದ ಪನ್ನೀರ್ಸೆಲ್ವಂ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿದ್ದರು, ಈ ವೇಳೆ ಪನ್ನೀರ್ ಸೆಲ್ವಂಆಡಳಿತರೂಢ ಡಿಎಂಕೆ ಪಕ್ಷದ ಸದಸ್ಯತ್ವ ಸ್ವೀಕರಿಸಿದ್ದಾರೆ.
ಪನ್ನೀರ್ಸೆಲ್ವಂ ಅವರೊಂದಿಗೆ ಎಐಎಡಿಎಂಕೆ ಪಕ್ಷದ ಹಲವರು ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. 2022ರ ಜುಲೈ 11ರಂದು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನೇಮಿಸಲಾಗಿತ್ತು. ಪ್ರತಿಸ್ಪರ್ಧಿಯಾಗಿದ್ದ ಒ.ಪನ್ನೀರಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲಾಗಿತ್ತು.
ಎಐಎಡಿಎಂಕೆಯ ಮಾಜಿ ಸಚಿವ ಮತ್ತು ಹಾಲಿ ಶಾಸಕ ಆರ್. ವೈತಿಲಿಂಗಂ ಜನವರಿ 21 ರಂದು ವಿಧಾನಸಭೆಗೆ ರಾಜೀನಾಮೆ ನೀಡಿ ನಂತರ ಚೆನ್ನೈನಲ್ಲಿ ಡಿಎಂಕೆ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ.