ಜೈಪುರ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಕಾಂಗ್ರೆಸ್ ಪ್ರಯತ್ನಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆರೋಪಿಸಿದ್ದಾರೆ.
ಅಜ್ಮೀರ್ನ ಕಾಯದ್ ವಿಶ್ರಮಸ್ಥಳಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪದೇ ಪದೇ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶೆಗೊಂಡಿದೆ. ಕಾಂಗ್ರೆಸ್ ಇನ್ನು ಮುಂದೆ ಐಎನ್ಸಿ(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅಲ್ಲ, ಬದಲಿಗೆ "ಎಂಎಂಸಿ" - ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಆಗಿ ಬದಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಎಐ ಸಮ್ಮೇಳನವನ್ನು ಉಲ್ಲೇಖಿಸಿದ ಪ್ರಧಾನಿ, ಪ್ರಪಂಚದಾದ್ಯಂತದ ನಾಯಕರು ಒಂದೇ ಸೂರಿನಡಿ ಒಟ್ಟುಗೂಡಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ ಎಂದರು.
"ದೆಹಲಿಯಲ್ಲಿ ನಡೆದ ವಿಶ್ವದ ಅತಿದೊಡ್ಡ ಎಐ ಸಮ್ಮೇಳನದಲ್ಲಿ ಅನೇಕ ದೇಶಗಳ ಪ್ರಧಾನಿಗಳು, ಅಧ್ಯಕ್ಷರು ಮತ್ತು ಮಂತ್ರಿಗಳು ಭಾಗವಹಿಸಿದ್ದರು. ವಿಶ್ವದ ಪ್ರಮುಖ ಕಂಪನಿಗಳು ಮತ್ತು ಅವುಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಎಲ್ಲರೂ ಭಾರತವನ್ನು ತುಂಬು ಹೃದಯದಿಂದ ಹೊಗಳಿದರು ಮತ್ತು ದೇಶ ಈ ಬಗ್ಗೆ ಹೆಮ್ಮೆಪಡುತ್ತದೆ" ಎಂದು ಅವರು ಹೇಳಿದರು.
ಆದರೆ ಕಾಂಗ್ರೆಸ್, ಈ ಕಾರ್ಯಕ್ರಮದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿತು. "ಜಗತ್ತಿನಾದ್ಯಂತದ ಅತಿಥಿಗಳ ಸಮ್ಮುಖದಲ್ಲಿ, ಕಾಂಗ್ರೆಸ್ ಪಕ್ಷವು ದೇಶವನ್ನು ಅವಮಾನಿಸಲು ಪ್ರಯತ್ನಿಸಿತು. ವಿದೇಶಿ ಗಣ್ಯರ ಮುಂದೆ ಭಾರತವನ್ನು ಅವಮಾನಿಸಲು ಅವರು ದೊಡ್ಡ ನಾಟಕ ಪ್ರದರ್ಶಿಸಿದರು" ಎಂದು ಮೋದಿ ವಾಗ್ದಾಳಿ ನಡೆಸಿದರು.
ಮೋದಿ ಕಾಂಗ್ರೆಸ್ ಒಂದು ಕಾಲದಲ್ಲಿ ಇದ್ದಂತೆ ಈಗ ಇಲ್ಲ. "ಒಂದು ಕಾಲದಲ್ಲಿ, ಕಾಂಗ್ರೆಸ್ ಐಎನ್ಸಿ(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಆಗಿತ್ತು. ಆದರೆ ಇಂದು, ಐಎನ್ಸಿ ಬದಲಿಗೆ, ಅದು ಎಂಎಂಸಿ(ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್) ಆಗಿ ಮಾರ್ಪಟ್ಟಿದೆ" ಎಂದು ತೀಕ್ಷ್ಣವಾಗಿ ಟೀಕಿಸಿದರು.
ಮುಸ್ಲಿಂ ಲೀಗ್ ದೇಶವನ್ನು ವಿಭಜಿಸಿದೆ ಎಂದು ಆರೋಪಿಸಿದ ಮೋದಿ, ಕಾಂಗ್ರೆಸ್ ಇದೇ ರೀತಿಯ ರಾಜಕೀಯವನ್ನು ಮಾಡುತ್ತಿದೆ. ಮಾವೋವಾದಿಗಳು ಭಾರತದ ಸಮೃದ್ಧಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ವಿರೋಧಿಸುತ್ತಾರೆ. ಆದರೆ "ದೇಶವು ಅಂತಹ ದುಷ್ಕೃತ್ಯಗಳನ್ನು ಎಂದಿಗೂ ಕ್ಷಮಿಸುವುದಿಲ್ಲ" ಎಂದರು.