ನವದೆಹಲಿ: ಖ್ಯಾತ ತಮಿಳು ನಟ ಮತ್ತು ರಾಜಕಾರಣಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರವನ್ನು ತಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನ "ತಮಿಳು ಸಂಸ್ಕೃತಿ ಮೇಲಿನ ದಾಳಿ" ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದ್ದಾರೆ.
ಜನ ನಾಯಗನ್ಗೆ ಸೆನ್ಸಾರ್ ಪ್ರಮಾಣಪತ್ರ ನೀಡದ ಕುರಿತ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ "ತಮಿಳು ಜನರ ಧ್ವನಿಯನ್ನು ಅಡಗಿಸುವಲ್ಲಿ" ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
"ಜನ ನಾಯಗನ್ ಚಿತ್ರವನ್ನು ನಿರ್ಬಂಧಿಸಲು ಮಾಹಿತಿ & ಪ್ರಸಾರ ಸಚಿವಾಲಯದ ಪ್ರಯತ್ನವು ತಮಿಳು ಸಂಸ್ಕೃತಿಯ ಮೇಲಿನ ದಾಳಿಯಾಗಿದೆ. ಮೋದಿ, ತಮಿಳು ಜನರ ಧ್ವನಿ ಅಡಗಿಸುವಲ್ಲಿ ನೀವು ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ತಮಿಳು ಚಿತ್ರ ಜನ ನಾಯಗನ್ ನಿರ್ಮಾಪಕರು ಸೋಮವಾರ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದಾರೆ.
ಜನವರಿ 9 ರಂದು, ಜನ ನಾಯಗನ್ಗೆ ಸೆನ್ಸಾರ್ ಪ್ರಮಾಣಪತ್ರವನ್ನು ತಕ್ಷಣವೇ ನೀಡಬೇಕೆಂದು ಸಿಬಿಎಫ್ಸಿಗೆ ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ತಡೆಹಿಡಿದಿದೆ. ಇದರಿಂದ ರಾಜಕೀಯ ಕಾರಣದಿಂದ ಗಮನ ಸೆಳೆದಿರುವ ನಟ-ರಾಜಕಾರಣಿ ವಿಜಯ್ ಅವರ ಚಿತ್ರದ ಅನಿಶ್ಚಿತತೆಯನ್ನು ಎದುರಿಸುತ್ತಿದೆ.
ಆದಾಗ್ಯೂ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಸಕಾಲದಲ್ಲಿ ಪ್ರಮಾಣೀಕರಣವನ್ನು ನೀಡದ ಕಾರಣ ಚಿತ್ರವು ಕೊನೆಯ ಕ್ಷಣದ ಅಡೆತಡೆಗಳನ್ನು ಎದುರಿಸುತ್ತಿದೆ.