ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕನಿಷ್ಠ 60 ವಿದ್ಯಾರ್ಥಿಗಳು, ಯಾತ್ರಿಕರೊಂದಿಗೆ, ಶುಕ್ರವಾರ ಮಧ್ಯರಾತ್ರಿ ಎರಡು ವಿಮಾನಗಳಲ್ಲಿ ಇರಾನ್ನಿಂದ ಭಾರತಕ್ಕೆ ಮರಳುತ್ತಿದ್ದಾರೆ.
ಪ್ರಸ್ತುತ ಪ್ರಯಾಣಿಸುತ್ತಿರುವ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಕಾಶ್ಮೀರದವರಾಗಿದ್ದು, ಸದ್ಯ ಇರಾನ್ನ ಶಿರಾಜ್ ವಿಮಾನ ನಿಲ್ದಾಣದಲ್ಲಿದ್ದು, ಮಧ್ಯರಾತ್ರಿ ವೇಳೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂದು ಜೆ & ಕೆ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹೇಹಾಮಿ ಹೇಳಿದ್ದಾರೆ.
“ಅವರು ಶಿರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಅರೇಬಿಯಾ ವಿಮಾನ G9 214ದಲ್ಲಿ ಪ್ರಯಾಣಿಸುತ್ತಿದ್ದಾರೆ. ನಂತರ ಶಾರ್ಜಾದಿಂದ ದೆಹಲಿಯ IGI ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ವಿಮಾನ G9 463 ನಲ್ಲಿ ಪ್ರಯಾಣಿಸುತ್ತಿದ್ದಾರೆ. ಆ ವಿಮಾನವು ಬೆಳಗಿನ ಜಾವ 2:40 ಕ್ಕೆ ದೆಹಲಿಯಲ್ಲಿ ಇಳಿಯಲಿದೆ” ಎಂದು ಅವರು ತಿಳಿಸಿದ್ದಾರೆ.
ಮಹಾನ್ ಏರ್ ನಿರ್ವಹಿಸುವ ಮತ್ತೊಂದು ವಿಮಾನವು ಭಾರತೀಯ ಪ್ರಜೆಗಳನ್ನು ಮರಳಿ ಕರೆತರುತ್ತಿದೆ ಎಂದು ಖುಹೇಹಾಮಿ ಹೇಳಿದರು. "ಮಹಾನ್ ಏರ್ ವಿಮಾನ W5 071 ಟೆಹ್ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ 12:10 ಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಎರಡು ವಿಮಾನಗಳಲ್ಲಿ ಗಮನಾರ್ಹ ಸಂಖ್ಯೆಯ ಯಾತ್ರಿಕರು ಸಹ ಪ್ರಯಾಣಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಖುಹಾಮಿ ಪ್ರಕಾರ, ಕಾಶ್ಮೀರ ಮತ್ತು ಕಾರ್ಗಿಲ್ನ ಸುಮಾರು 50 ರಿಂದ 60 ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಯಾತ್ರಿಕರು ಎರಡು ವಿಮಾನಗಳಲ್ಲಿ ಹಿಂತಿರುಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸುಮಾರು 2,000 ವಿದ್ಯಾರ್ಥಿಗಳು ಇರಾನ್ನ ವಿವಿಧ ಪ್ರಾಂತ್ಯಗಳಲ್ಲಿ ವೈದ್ಯಕೀಯ ಮತ್ತು ಇತರ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ.
ಇರಾನ್ನಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಆ ದೇಶವನ್ನು ತೊರೆಯುವಂತೆ ಸೂಚಿಸಿತ್ತು. ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಇರಾನ್ನಲ್ಲಿರುವ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ದೇಶಕ್ಕೆ ಮರಳುವಂತೆ ಸೂಚಿಸಿತ್ತು.