ಪುಣೆ: ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಮುಖ ಆರೋಪಿ ಚೇತನ್ ಚೌಧರಿ ಲೋಹಗಢ ಕೋಟೆಯಲ್ಲಿ ನಡೆದಿದ್ದ ಕೊಲೆಯ ಸಂಪೂರ್ಣ ದೃಶ್ಯವನ್ನು ಪೊಲೀಸರ ಎದುರು ಮರುಸೃಷ್ಟಿಸಿದ್ದಾನೆ ಎಂದು ತಿಳಿದುಬಂದಿದೆ.
ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಪ್ರಕರಣದ ಮರುಸೃಷ್ಟಿ ವೇಳೆ ಚೇತನ್, "ಸಿಯಾ ಸಂಕೇತ ಕೊಟ್ಟ ನಂತರವೇ ನಾವು ಕೇತನ್ನನ್ನು ಪ್ರಪಾತಕ್ಕೆ ತಳ್ಳಿದೆವು" ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಈ ಹೇಳಿಕೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತಿದೆ.
ಪೊಲೀಸರು ಆರೋಪಿಗಳನ್ನು ಘಟನಾ ಸ್ಥಳವಾದ ಲೋಹಗಢ ಕೋಟೆಗೆ ಕರೆದೊಯ್ದು, ಕೇತನ್ ಅಗರ್ವಾಲ್ ಅವರನ್ನು ಯಾವ ಮಾರ್ಗದಲ್ಲಿ ಕರೆದುಕೊಂಡು ಹೋದರು, ಯಾವ ಸ್ಥಳದಲ್ಲಿ ನಿಲ್ಲಿಸಿದರು ಹಾಗೂ ಯಾವ ರೀತಿಯಲ್ಲಿ ಕಂದಕಕ್ಕೆ ತಳ್ಳಲಾಯಿತು ಎಂಬುದನ್ನು ಮರುಸೃಷ್ಟಿಸಿದರು. ತನಿಖಾ ತಂಡವು ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ದಾಖಲೆಯನ್ನೂ ಮಾಡಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೇತನ್ ಅಗರ್ವಾಲ್ ಅವರನ್ನು ಪ್ರವಾಸದ ನೆಪದಲ್ಲಿ ಲೋಹಗಢ ಕೋಟೆಗೆ ಕರೆಸಿಕೊಂಡು ಹೋಗಲಾಗಿತ್ತು. ಬಳಿಕ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು, ಸಿಯಾ ಗೋಯಲ್ ಸಂಕೇತ ನೀಡಿದ ತಕ್ಷಣ ಕೇತನ್ ಅವರನ್ನು ಆಳವಾದ ಕಂದಕಕ್ಕೆ ತಳ್ಳಿದರೆಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಯಾ ಗೋಯಲ್, ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದು, ಕೊಲೆ, ಸಂಚು ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿವಿಧ ಆರೋಪಗಳಡಿ ತನಿಖೆ ಮುಂದುವರಿದಿದೆ.
ಪೊಲೀಸರು ಸಂಗ್ರಹಿಸಿರುವ ಡಿಜಿಟಲ್ ಸಾಕ್ಷ್ಯಗಳು, ಕರೆ ವಿವರಗಳು, ಸ್ಥಳ ಪರಿಶೀಲನೆ ಹಾಗೂ ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಪ್ರಕರಣದ ಆರೋಪಪಟ್ಟಿ ಸಿದ್ಧಪಡಿಸುವ ಕಾರ್ಯವೂ ವೇಗ ಪಡೆದುಕೊಂಡಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.