ಪಾರ್ವತಿಪುರ: ಶಿಕ್ಷಕರು ವಿದ್ಯಾರ್ಥಿಗಳ ನಡುವಣ ಸಂಬಂಧ ಎಂತಹದ್ದು ಎಂಬುದಕ್ಕೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸಾಕ್ಷಿಯಂತಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಏಳನೇ ತರಗತಿಯ ಬಾಲಕಿಯ ಜೀವ ಉಳಿಸಲು ಶಿಕ್ಷಕಿ ಮಾಡಿದ ಕಾರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು. ಶಿಕ್ಷಕಿಯೊಬ್ಬರು ತನ್ನ ಬೆನ್ನ ಮೇಲೆ ಅಸ್ವಸ್ಥ ಬಾಲಕಿಯನ್ನು ಹೊತ್ತುಕೊಂಡು ಕಲ್ಲುಮುಳ್ಳುಗಳಿಂದ ಕೂಡಿದ್ದ ರಸ್ತೆಯಲ್ಲಿ ಸುಮಾರು 6 ಕಿಲೋ ಮೀಟರ್ ನಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಶಿಕ್ಷಕಿ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಆಂಧ್ರ ಪ್ರದೇಶದ ಪಾರ್ವತಿಪುರ ಮಣ್ಯಂಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿರುವ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವ್ಯಾಸಂಗ ಮಾಡುತ್ತಿರುವ 7ನೇ ತರಗತಿ ವಿದ್ಯಾರ್ಥಿನಿ ಭುವನೇಶ್ವರಿ ದಿಢೀರನ್ನೆ ಅಸ್ವಸ್ಥಗೊಂಡಿದ್ದಾಳೆ.
ಆಸ್ಪತ್ರೆಗೆ ಕಳುಹಿಸಲು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲದೇ ಶಾಲಾ ಸಿಬ್ಬಂದಿ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಶಿಕ್ಷಕಿ ಹೇಮನಿ, ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು ಕಲ್ಲುಮುಳ್ಳುಗಳಿಂದ ಕೂಡಿದ ರಸ್ತೆಯಲ್ಲಿ ಸಾಗಿ ಜಿಲ್ಲಾ ಆಸ್ಪತ್ರೆ ತಲುಪಿದ್ದಾರೆ. ಸದ್ಯ ಬಾಲಕಿ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕಿ ನಡೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದ್ದು, ಆಂಧ್ರಪ್ರದೇಶ ಮಹಿಳಾ ಮತ್ತು ಮಕ್ಕಳ ಇಲಾಖೆ ಹೇಮನಿ ಅವರನ್ನು ಕರೆದು ಸನ್ಮಾನಿಸಿದೆ.