ನವದೆಹಲಿ; ದೆಹಲಿಯ ಅಪಾರ್ಟ್ಮೆಂಟ್ ಆವರಣದಲ್ಲಿ ಶನಿವಾರ ರಾತ್ರಿ 28 ವರ್ಷದ ನವವಿವಾಹಿತೆ ಆಕೃತಿ ಸುತಾರ್ ಎಂಬುವವರ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆಗಾಗಿ ಆಕೆಯ ಪತಿ ಮತ್ತು ಕುಟುಂಬಸ್ಥರೇ ಸೇರಿ ಮಾಡಿರುವ ಕೊಲೆ ಎಂದು ಆಕೃತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಛತ್ತರ್ಪುರದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಆಕೃತಿ ಮೃತದೇಹ, ಲೋಧಿ ಕಾಲೋನಿಯಲ್ಲಿರುವ ಅಪಾರ್ಟ್ಮೆಂಟ್ ಹೊರಗೆ ಶನಿವಾರ ರಾತ್ರಿ 9 ಗಂಟೆ ಪತ್ತೆಯಾಗಿತ್ತು. ಆಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಲೋಧಿ ಕಾಲೋನಿಯ ಪಾಲಿಕಾ ಕುಂಜ್ ವಸತಿ ಸಮುಚ್ಚಯದ ಆವರಣದಲ್ಲಿ ಆಕೃತಿಯ ಮೃತದೇಹ ಪತ್ತೆಯಾಗಿದೆ. ಕಟ್ಟಡದಿಂದ ಕೆಳಗೆ ಬಿದ್ದ ಪರಿಣಾಮ ಆಕೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಕೃತಿ ಸುತಾರ್ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 24ರಂದು ಮದುವೆಯಾದ ಬಳಿಕ ರಜೆಯಲ್ಲಿದ್ದ ಆಕೃತಿ, ಜು.4ರಂದು ಮೊದಲ ಬಾರಿಗೆ ಕಚೇರಿಗೆ ಹಾಜರಾಗಿದ್ದರು. ಕೆಲಸಕ್ಕೆ ಮರಳಿದ ಸಂತಸದಲ್ಲಿ ಸಹೋದ್ಯೋಗಿಗಳಿಗಾಗಿ ಸಣ್ಣ ಪಾರ್ಟಿಯನ್ನೂ ಆಯೋಜಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಜೆ ಸುಮಾರು 6 ಗಂಟೆ ವೇಳೆಗೆ ಆಕೃತಿ ತನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಕಚೇರಿಯ ಪಾರ್ಟಿ ಯಶಸ್ವಿಯಾಗಿ ನಡೆದಿದ್ದು, ತಾನು ಮನೆಗೆ ಹಿಂದಿರುಗುತ್ತಿರುವುದಾಗಿ ತಿಳಿಸಿದ್ದರು. ಆ ವೇಳೆ ಆಕೆಯ ಧ್ವನಿಯಲ್ಲಿ ಯಾವುದೇ ಆತಂಕ ಅಥವಾ ಖಿನ್ನತೆಯ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಕುಟುಂಬ ಹೇಳಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಯ ಸಾಧ್ಯತೆಯನ್ನು ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ.
ಆಕೃತಿ ತಾಯಿಯೊಂದಿಗೆ ಮಾತನಾಡಿದ ಕೇವಲ ಎರಡು ಗಂಟೆಗಳ ನಂತರ, ಅಂದರೆ ರಾತ್ರಿ 8 ಗಂಟೆಗೆ ಆಕೆಯ ಪತಿ ಅರಸು ಸಿಕ್ಕಾ ಆಕೆಯ ಪೋಷಕರಿಗೆ ಕರೆ ಮಾಡಿ, ಆಕೃತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಅದಾಗಿ ಕೇವಲ 90 ನಿಮಿಷಗಳ ಒಳಗೆ ಪಾಲಿಕಾ ಕುಂಜ್ನಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಆಕೃತಿ ಮತ್ತು ಅರಸು ಸಿಕ್ಕಾ ಪರಸ್ಪರ ಎಂಟು ವರ್ಷಗಳ ಕಾಲ ಪ್ರೀತಿಸಿ ಏಪ್ರಿಲ್ 24 ರಂದು ಮದುವೆಯಾಗಿದ್ದರು. ಪತಿ ಅರಸು ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ಮದುವೆಯಾದ ದಿನದಿಂದಲೇ ಅರಸು ಮತ್ತು ಆತನ ಕುಟುಂಬದವರು 20 ಲಕ್ಷ ರೂ. ವರದಕ್ಷಿಣೆ ತರುವಂತೆ ಆಕೃತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಅರಸು ಹಲವು ಬಾರಿ ಆಕೃತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ.