ಮುಂಬೈ: ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಸುಮಾರು ರೂ. 7,000 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಮಿಸ್ಸಿಂಗ್ ಲಿಂಕ್ ಸುರಂಗದ ಒಂದು ಭಾಗ ಕುಸಿದು ಬಿದ್ದಿದ್ದು, ಪರಿಣಾಮ ಸೋಮವಾರ ಮಹಾರಾಷ್ಟ್ರದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ ಈ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಆಹಾರ, ನೀರು ಇಲ್ಲದೆ ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡರು.
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(MSRDC) ನಿರ್ಮಿಸಿದ 19 ಕಿಮೀ ಮಿಸ್ಸಿಂಗ್ ಲಿಂಕ್ ಯೋಜನೆಯನ್ನು ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು 20-25 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಯೋಜನೆಯನ್ನು ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಿದ್ದರು.
ಆದಾಗ್ಯೂ, ಉದ್ಘಾಟನೆಯಾದ ಕೇವಲ ಒಂಬತ್ತು ವಾರಗಳ ನಂತರ, ಭಾರೀ ಮಳೆಯಿಂದ ಸುರಂಗದ ಒಂದು ಭಾಗ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಸುರಂಗ ಕುಸಿತದಿಂದ ಎಕ್ಸ್ಪ್ರೆಸ್ವೇಯ ಎರಡೂ ಬದಿಗಳಲ್ಲಿ ಹಲವಾರು ಗಂಟೆಗಳ ಕಾಲ ವಾಹನಗಳು ಸಿಲುಕಿಕೊಂಡಿದ್ದವು. ಸುರಂಗ ಕುಸಿತದ ನಂತರ ಮಳೆನೀರು ಹೆದ್ದಾರಿಗೆ ಹರಿದಿದ್ದು, ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಅಪಾಯವನ್ನು ಹೆಚ್ಚಿಸಿತು.
ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಭಾರೀ ಮಳೆಯಿಂದಾಗಿ ಕುಸಿತ ಸಂಭವಿಸಿದೆ ಎಂದು ಹೇಳಿದ್ದಾರೆ.
"ನಮ್ಮ ನಿಯಂತ್ರಣಕ್ಕೆ ಮೀರಿದ ಹಲವು ವಿಷಯಗಳಿವೆ. ಮಳೆ ತುಂಬಾ ಜೋರಾಗಿದ್ದು, ಮಿಸ್ಸಿಂಗ್ ಲಿಂಕ್ನಲ್ಲಿ ಭೂಕುಸಿತ ಉಂಟಾಗಿದೆ. ಮೊದಲ ಬಾರಿಗೆ, ಹೆದ್ದಾರಿಯ ಆ ನಿರ್ದಿಷ್ಟ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ 100 ಟನ್ಗಳಿಗೂ ಹೆಚ್ಚು ಅವಶೇಷಗಳು ರಸ್ತೆಯಲ್ಲಿ ಸಂಗ್ರಹಗೊಂಡಿವೆ. ಆದಾಗ್ಯೂ, ಅಗ್ನಿಶಾಮಕ ದಳ ಮತ್ತು ಇತರ ಸರ್ಕಾರಿ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸಿದರು" ಎಂದು ಫಡ್ನವೀಸ್ ತಿಳಿಸಿದ್ದಾರೆ.
ಈ ಘಟನೆ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ನಿರ್ಮಾಣದ ಗುಣಮಟ್ಟದ ಬಗ್ಗೆ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು, ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಗುಣಮಟ್ಟದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
"ಭ್ರಷ್ಟಾಚಾರವು ಎಷ್ಟು ದೊಡ್ಡದಾಗಿದೆ ಎಂದರೆ, ಗುತ್ತಿಗೆದಾರರು ಶಾಸಕರು, ಸಂಸದರು, ಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಶೇಕಡಾ 50 ಕ್ಕಿಂತ ಹೆಚ್ಚು ಖರ್ಚು ಮಾಡಲಾಗಿದೆ. ಇದರ ಪರಿಣಾಮವಾಗಿ ಉದ್ಘಾಟನೆಯಾದ ಒಂಬತ್ತು ವಾರಗಳಲ್ಲಿ ಕಳಪೆ ಕಾಮಗಾರಿಯಿಂದ ಸುರಂಗ ಕುಸಿದಿದೆ. ಮಿಸ್ಸಿಂಗ್ ಲಿಂಕ್ಗೆ ಖರ್ಚು ಮಾಡಿದ 7,000 ಕೋಟಿ ರೂ. ಮಳೆಯಲ್ಲಿ ಕೊಚ್ಚಿಹೋಗಿದೆ" ಎಂದು ಸಪ್ಕಲ್ ಆರೋಪಿಸಿದ್ದಾರೆ.
ಶಿವಸೇನಾ (ಯುಬಿಟಿ) ಶಾಸಕ ಮತ್ತು ಮಾಜಿ ಸಚಿವ ಆದಿತ್ಯ ಠಾಕ್ರೆ ಕೂಡ ಯೋಜನೆಯನ್ನು ಪ್ರಶ್ನಿಸಿದ್ದು, ಅದರ ವೆಚ್ಚವು ಪೂರ್ಣಗೊಳ್ಳುವ ಮೊದಲು ಹಲವಾರು ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.
"ಉದ್ಘಾಟನೆಯಾದ ಎರಡು ತಿಂಗಳೊಳಗೆ, ಮಿಸ್ಸಿಂಗ್ ಲಿಂಕ್ ಕುಸಿದಿದೆ. ಇದಲ್ಲದೆ, ಹೊಸದಾಗಿ ನಿರ್ಮಿಸಲಾದ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಪ್ರಸ್ತುತ ಸರ್ಕಾರಕ್ಕೆ ಭ್ರಷ್ಟಾಚಾರ ಮೊದಲು. ಅದು ರಸ್ತೆಗಳಾಗಲಿ ಅಥವಾ ದೇವಾಲಯಗಳಾಗಲಿ" ಎಂದು ಠಾಕ್ರೆ ಕಿಡಿ ಕಾರಿದ್ದಾರೆ.