ನವದೆಹಲಿ: E20 ಪೆಟ್ರೋಲ್ (ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್) ಮಾರಾಟ ಕಡ್ಡಾಯಕ್ಕೆ ವಾಹನ ಮಾಲೀಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಸಂಪೂರ್ಣವಾಗಿ ಹಾಳಾಗುತ್ತದೆ ಎಂಬ ಆರೋಪಗಳ ನಡುವೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಟೀಕಾಕಾರರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನವದೆಹಲಿಯಲ್ಲಿ ನಡೆದ 'ವಿಕ್ಷಿತ್ ಭಾರತ್ ಕಾನ್ಕ್ಲೇವ್' ಅನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯು ಆರ್ಥಿಕ ಹೊರೆಯಾಗಿದೆ - ಇಂಧನ ಆಮದುಗಾಗಿ ವಾರ್ಷಿಕ 22 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಮತ್ತು ಇದು ಪರಿಸರಕ್ಕೆ ಅಪಾಯ. ರಾಷ್ಟ್ರದ ಪ್ರಗತಿಗೆ ಶುದ್ಧ ಇಂಧನ ಅಳವಡಿಕೆ ಅತ್ಯಂತ ನಿರ್ಣಾಯಕ ಎಂದರು.
"E20 ಪೆಟ್ರೋಲ್ನಿಂದಾಗಿ ಒಂದೇ ಒಂದು ಕಾರಿಗೆ ಸಮಸ್ಯೆಯಾದ ಪ್ರಕರಣ ವರದಿಯಾಗಿಲ್ಲ. E20 ಪೆಟ್ರೋಲ್ ಬಳಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸಿದ ಯಾವುದೇ ಕಾರು ದೇಶದಲ್ಲಿ ಇದೆಯೇ? ಒಂದನ್ನು ತೋರಿಸಿ" ಎಂದು ಗಡ್ಕರಿ ಸವಾಲು ಹಾಕಿದರು.
"... ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಬಗ್ಗೆಸುಳ್ಳು ನಿರೂಪಣೆಗಳನ್ನು ಹರಡಲಾಗುತ್ತಿದೆ. ಇವು ಪೇಯ್ಡ್ ಅಭಿಯಾನಗಳಾಗಿವೆ" ಎಂದು ಅವರು ಹೇಳಿದರು.
ಭಾರತವು ಈಗಾಗಲೇ ಪೆಟ್ರೋಲ್ನೊಂದಿಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣವನ್ನು ಯಶಸ್ವಿಯಾಗಿ ಸಾಧಿಸಿದೆ. ಇದು ಪರಿಣಾಮಕಾರಿಯಾಗಿ ಉರಿಯುವ ಇಂಧನವಾಗಿದೆ. ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದರು.
ಗಂಡ್ಕರಿ ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳು ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಅದಕ್ಕಾಗಿಯೇ ಅವರು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ನಮ್ಮ ಕುಟುಂಬ ಸದಸ್ಯರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ನಿಜ. ಆದರೆ ಅವರ ಕಂಪನಿಗಳು ಎಥೆನಾಲ್ ಉತ್ಪಾದನೆಯ ಮೇಲೆ ಅವಲಂಬಿತವಾಗಿಲ್ಲ ಎಂದರು.
ವಾಹನಗಳಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ (E20) ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಚುರುಕುಗೊಳಿಸಿದೆ. ಆದಾಗ್ಯೂ, ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಒಂದಷ್ಟು ತಜ್ಞರು, ಈ ರೀತಿಯ ಪೆಟ್ರೋಲ್, ಇಂಧನ ದಕ್ಷತೆಯ ಮೇಲೆ ಅಂದರೆ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಎಂಜಿನ್ ಹಾಳಾಗುವ ಸಾಧ್ಯತೆ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.