ನವದೆಹಲಿ: ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕಾಕ್ರೋಚ್ ಜನತಾ ಪಕ್ಷ(CJP), ನೀಟ್ ಅಕ್ರಮ ಖಂಡಿಸಿ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 20ನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ, ಮಳೆಗಾಲದ ಅಧಿವೇಶನದ ಮೊದಲ ದಿನವಾದ ಜುಲೈ 20 ರಂದು ಸಂಸತ್ ಚಲೋ ನಡೆಸುವುದಾಗಿ ಗುರುವಾರ ಘೋಷಿಸಿದೆ.
ನೀಟ್ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಯುವಕರ ಸಂಘಟನೆ, ಭಾರೀ ಮಳೆಯ ಹೊರತಾಗಿಯೂ ಪ್ರತಿಭಟನಾಕಾರರು, ಪ್ರತಿಭಟನಾ ಸ್ಥಳಕ್ಕೆ ಟಾರ್ಪಲ್ಗಳನ್ನು ತರದಂತೆ ದೆಹಲಿ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿದೆ.
ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ಶಿಕ್ಷಣತಜ್ಞ ಮತ್ತು ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೊಂದಿಗೆ ಜುಲೈ 20 ರಂದು ಜಂತರ್ ಮಂತರ್ನಿಂದ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಸಿಜೆಪಿ ತಿಳಿಸಿದೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಪರೀಕ್ಷೆಯನ್ನು ರದ್ದುಪಡಿಸ ನಂತರ ತಮ್ಮ ಪ್ರಾಣವನ್ನೇ ಕಳೆದುಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ದೇಶಾದ್ಯಂತದ ವಿದ್ಯಾರ್ಥಿಗಳು, ಪೋಷಕರು ಮತ್ತು ನಾಗರಿಕರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಸಿಜೆಪಿ ಕರೆ ನೀಡಿದೆ.
ದೇಶದ ಜನ, ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಬುಧವಾರ ರಾತ್ರಿ ಸೋನಮ್ ವಾಂಗ್ಚುಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.
"ನನ್ನ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ನೀವು ಕಳುಹಿಸಿದ ಸಂದೇಶಗಳಿಗೆ ಧನ್ಯವಾದಗಳು. ಆದರೆ ಅದು ಆತ್ಮಹತ್ಯೆ ಮಾಡಿಕೊಂಡ 20 ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಿಲ್ಲ ಅಥವಾ ಲಡಾಖ್ ಪರ್ವತಗಳು ಅಥವಾ ಭಾರತದ ನದಿಗಳನ್ನು ರಕ್ಷಿಸಲು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
"ನೀವು ನಿಜವಾಗಿಯೂ ಸಹಾಯ ಮಾಡಲು ಬಯಸಿದರೆ, ಆರಾಮದಾಯಕವಾದ ಸೋಫಾಗಳಿಂದ ಸಂದೇಶಗಳನ್ನು ಕಳುಹಿಸುವುದಕ್ಕಿಂತ ಸ್ವಲ್ಪ ಹೆಚ್ಚಿನದನ್ನು ಮಾಡಿ; ಭಾರತೀಯ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಜುಲೈ 20 ರಂದು ದೆಹಲಿಗೆ ಮತ್ತು ಜಂತರ್ ಮಂತರ್ಗೆ ಬನ್ನಿ. ಒಟ್ಟಾಗಿ, ನಾವು ಸಂಸತ್ ಚಲೋ ನಡೆಸೋಣ. ನಮ್ಮ ಗೌರವಾನ್ವಿತ ಸಂಸದರು ಈ ಸಮಸ್ಯೆಯನ್ನು ಎತ್ತಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡೋಣ" ಎಂದು ವಾಂಗ್ಚುಕ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.