ನವದೆಹಲಿ: ಉತ್ತರ ಭಾರತದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ದೆಹಲಿಯಲ್ಲಿ ರಾತ್ರಿ ಪೂರ್ತಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಇದೇ ವೇಳೆ ಗುಜರಾತ್ನ ಸುರತ್ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಉತ್ತರಾಖಂಡ ಹಾಗೂ ಕೇರಳದಲ್ಲಿ ಭೂಕುಸಿತದ ಆತಂಕ ಹೆಚ್ಚಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಯಲ್ಲಿ 'ರೆಡ್ ಅಲರ್ಟ್' ಘೋಷಿಸಿದೆ. ಗುಡುಗು ಮತ್ತು ಮಿಂಚಿನೊಂದಿಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಐಎಂಡಿ ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಸಫ್ದರ್ಜಂಗ್ ಹವಾಮಾನ ಕೇಂದ್ರದಲ್ಲಿ 72.6 ಮಿ.ಮೀ. ಮಳೆ ದಾಖಲಾಗಿದೆ. ಲೋಧಿ ರಸ್ತೆ ಪ್ರದೇಶದಲ್ಲಿ 80.2 ಮಿ.ಮೀ., ರಿಡ್ಜ್ನಲ್ಲಿ 77.8 ಮಿ.ಮೀ., ಪಾಲಂನಲ್ಲಿ 63 ಮಿ.ಮೀ. ಹಾಗೂ ಆಯಾನಗರದಲ್ಲಿ 57.4 ಮಿ.ಮೀ. ಮಳೆಯಾಗಿದೆ.
ನಿರಂತರ ಸುರಿದ ಮಳೆಯಿಂದ ವಿಕಾಸ್ ಮಾರ್ಗ್, ಪೂರ್ವ ದೆಹಲಿಯ ಹಲವು ಪ್ರದೇಶಗಳು, ನವದೆಹಲಿ ರೈಲು ನಿಲ್ದಾಣ, ಮುನಿರ್ಕಾ, ಸದರ್ ಬಜಾರ್ ಹಾಗೂ ದ್ವಾರಕಾ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿವೆ. ದೆಹಲಿ-ನೊಯ್ಡಾ ಎಕ್ಸ್ಪ್ರೆಸ್ವೇಯಲ್ಲೂ ನೀರು ನಿಂತ ಪರಿಣಾಮ ವಾಹನಗಳು ನಿಧಾನವಾಗಿ ಸಂಚರಿಸಬೇಕಾಯಿತು. ರಸ್ತೆಗಳ ಮೇಲೆ ನೀರು ನಿಂತಿರುವುದು ಹಾಗೂ ಟ್ರಾಫಿಕ್ ಜಾಮ್ ದೃಶ್ಯಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಧರೆಗುರುಳಿದ ಮರಗಳು
ಭಾರೀ ಮಳೆಗೆ ಆಗ್ನೇಯ ದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದ ರಾಜಾ ಧೀರ್ ಸಿಂಗ್ ಮಾರ್ಗದಲ್ಲಿ ಎರಡು ಮರಗಳು ಬುಡಸಮೇತ ಉರುಳಿಬಿದ್ದಿವೆ. ಒಂದು ಮರ ಇಸ್ಕಾನ್ ದೇವಾಲಯದ ಸಮೀಪ ರಸ್ತೆ ಮೇಲೆ ಬಿದ್ದರೆ, ಮತ್ತೊಂದು ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ ಎದುರು ಬಿದ್ದ ಪರಿಣಾಮ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ.
ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಈ ವ್ಯವಸ್ಥೆ ಮತ್ತಷ್ಟು ಉತ್ತರಕ್ಕೆ ಚಲಿಸುವವರೆಗೆ ದೆಹಲಿಯಲ್ಲಿ ವ್ಯಾಪಕ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮತ್ತೊಂದೆಡೆ, ಗುಜರಾತ್ನ ಸುರತ್ನಲ್ಲಿ ಭಾರೀ ಮಳೆಯಿಂದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಾಖಂಡ ಮತ್ತು ಕೇರಳದಲ್ಲಿ ನಿರಂತರ ಮಳೆಯ ಹಿನ್ನೆಲೆ ಭೂಕುಸಿತದ ಅಪಾಯ ಹೆಚ್ಚಾಗಿದ್ದು, ಸ್ಥಳೀಯ ಆಡಳಿತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ದೆಹಲಿಯ ವಾಯು ಗುಣಮಟ್ಟ ತೃಪ್ತಿದಾಯಕ ಮಟ್ಟದಲ್ಲಿದ್ದು, ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (AQI) 61 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿ ನೀಡಿದೆ.