ಕೊಚ್ಚಿ: ಕುಂಭಮೇಳ 2025 ರಲ್ಲಿ ಸಾಕಷ್ಟು ವೈರಲ್ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ ಹಾಗೂ ಆಕೆಯ ಪತಿ ಫರ್ಮಾನ್ ಖಾನ್ ಕೇರಳ ಹೈಕೋರ್ಟ್ ಶುಕ್ರವಾರ ಬಿಗ್ ಶಾಕ್ ನೀಡಿದ್ದು, ದಂಪತಿಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಹಿಂಪಡೆದುಕೊಂಡಿದೆ.
ಅಂತರ್ಧರ್ಮೀಯ ವಿವಾಹ ವಿವಾದಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಕುಂಭಮೇಳ ಯುವತಿ ಮೊನಾಲಿಸಾ ಅವರನ್ನು ಪತ್ತೆಹಚ್ಚಲು ಅಥವಾ ಸಂಪರ್ಕಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ ನಂತರ, ಕೇರಳ ಹೈಕೋರ್ಟ್, ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ.
ಅರ್ಜಿದಾರರ ಸಂಪರ್ಕ ಸಂಖ್ಯೆ ಮತ್ತು ವಿಳಾಸವನ್ನು ಒದಗಿಸದ ಕಾರಣ ಅರ್ಜಿದಾರರನ್ನು ಪತ್ತೆಹಚ್ಚಲು ಪೊಲೀಸರು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾಗಿವೆ ಎಂದು ಸರ್ಕಾರಿ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ ನಂತರ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ ಇನ್ನು ಮುಂದೆ ಕೇವಲ ಆ ಯುವತಿ ಸ್ವತಃ ವಿನಂತಿಸಿದರೆ ಮಾತ್ರ ಪೊಲೀಸರು ರಕ್ಷಣೆ ಒದಗಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಮೊನಾಲಿಸಾಮೊನಾಲಿಸಾ ಪರವಾಗಿ ಕೋರ್ಟ್ ಗೆ ಹಾಜರಾಗಿದ್ದ ವಕೀಲರು, ತಮ್ಮ ಕಕ್ಷಿದಾರರಿಂದ ತಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯವು ಜೂನ್ 19 ರಂದು ನೀಡಿದ್ದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿತು.
ಆದಾಗ್ಯೂ, ಮಹಿಳೆ ರಕ್ಷಣೆ ಕೋರಿ ಲಿಖಿತವಾಗಿ ಪೊಲೀಸರನ್ನು ಸಂಪರ್ಕಿಸಿದರೆ, ಅವರು ಕಾನೂನಿನ ಪ್ರಕಾರ ಅಗತ್ಯವಾದ ಪೊಲೀಸ್ ರಕ್ಷಣೆಯನ್ನು ಒದಗಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವನ್ನು ಜುಲೈ 21 ರಂದು ಹೆಚ್ಚಿನ ವಿಚಾರಣೆಗಾಗಿ ಮುಂದೂಡಲಾಗಿದೆ.
ಸದ್ಯ ನಾನು ಕೇರಳದನಲ್ಲಿ ಇರುವುದರಿಂದ ಬದುಕಿದ್ದೇನೆ. ಒಂದು ವೇಳೆ ಮಧ್ಯಪ್ರದೇಶಕ್ಕೆ ಮರಳಿದರೆ, ಅಲ್ಲಿ ನನ್ನನ್ನು 'ಮರ್ಯಾದೆ ಹತ್ಯೆ' ಮಾಡುತ್ತಾರೆ ಎಂದು ಮೊನಾಲಿಸಾ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಗೆ ರಕ್ಷಣೆ ನೀಡುವಂತೆ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಎಸ್ಎಚ್ಒ ಅವರಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಅರ್ಜಿ ಇತ್ಯರ್ಥವಾಗುವವರೆಗೆ ಆಕೆಗೆ ರಕ್ಷಣೆ ಖಚಿತಪಡಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಸೆಂಟ್ರಲ್ ಸ್ಟೇಷನ್ ಎಸ್ಎಚ್ಒ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಆದರೆ, ಮೊನಾಲಿಸಾ ಮತ್ತು ಆಕೆಯ ಪತಿ ನಾಪತ್ತೆಯಾಗಿದ್ದಾರೆ. ಅವರು ನೀಡಿರುವ ವಿಳಾಸ ಅಥವಾ ದೂರವಾಣಿ ಸಂಖ್ಯೆಯ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ತಿಳಿಸಿದ ಬೆನ್ನಲ್ಲೇ ಹೈಕೋರ್ಟ್ ಈ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ. ಅಲ್ಲದೆ, ಹೀಗೆ ನಾಪತ್ತೆಯಾಗುವುದು ಆ ಯುವತಿಯ ಹಳೇ ಚಾಳಿ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.