ದೆಹಲಿ: 2020ರ ದೆಹಲಿ CAA ಗಲಭೆಯ ವೇಳೆ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ (Ankit Sharma) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ (Aam Aadmi Party) ಮಾಜಿ ನಾಯಕ ತಾಹೀರ್ ಹುಸೇನ್ (Tahir Hussain) ಮತ್ತು ಇತರ ನಾಲ್ವರು ಪ್ರಮುಖ ಆರೋಪಿಗಳು ದೋಷಿಗಳು ಎಂದು ನ್ಯಾಯಾಲಯ ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಪ್ರಕರಣ?
ಫೆಬ್ರವರಿ 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯ ಸಂದರ್ಭದಲ್ಲಿ, ಫೆಬ್ರವರಿ 25 ರಂದು ದಿನಸಿ ಸಾಮಗ್ರಿಗಳನ್ನು ಖರೀದಿಸಿ, ಮನೆಗೆ ಮರಳುತ್ತಿದ್ದ 26 ವರ್ಷದ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಚಾಂದ್ ಬಾಗ್ ಪ್ರದೇಶದಲ್ಲಿ ಉದ್ರಿಕ್ತ ಗಲಭೆಕೋರರ ಗುಂಪು ಅಪಹರಿಸಿ, ಬರ್ಬರವಾಗಿ ಕೊಲೆ ಮಾಡಿ ಶವವನ್ನು ಹತ್ತಿರದ ಚರಂಡಿಗೆ ಎಸೆದಿತ್ತು. ತನಿಖೆಯ ವೇಳೆ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್ ಮನೆಯನ್ನು ಗಲಭೆಕೋರರು ಕಲ್ಲು ತೂರಾಟ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಬಳಸಿದ್ದರು ಎಂಬುದು ಸಾಬೀತಾಗಿತ್ತು.
ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪ್ರವೀಣ್ ಸಿಂಗ್ ಅವರ ಪೀಠವು, ತಾಹೀರ್ ಹುಸೇನ್ನನ್ನು ಕೊಲೆ, ಅಪಹರಣ, ದಂಗೆ ಮತ್ತು ಧರ್ಮಗಳ ನಡುವೆ ದ್ವೇಷ ಸೇರಿದಂತೆ ಹಲವು ಗಂಭೀರ ಕಾಯ್ದೆಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಹುಸೇನ್ ಜೊತೆಗೆ ಇತರ 4 ಆರೋಪಿಗಳಾದ ನಾಜಿಮ್, ಕಾಸಿಮ್, ಅನಾಸ್ ಮತ್ತು ಜಾವೇದ್ ಅವರನ್ನೂ ನ್ಯಾಯಾಲಯ ದೋಷಿಗಳು ಎಂದು ಪರಿಗಣಿಸಿದೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿದ್ದ ಇತರ 6 ಜನರನ್ನು ಖುಲಾಸೆಗೊಳಿಸಲಾಗಿದೆ.
ಏತನ್ಮಧ್ಯೆ, CAA ವಿರೋಧಿ ಗಲಭೆಯ ವೇಳೆ ಒಟ್ಟು 53 ಜನರು ಪ್ರಾಣ ಕಳೆದುಕೊಂಡಿದ್ದರು. ಮತ್ತು ನೂರಾರು ಜನರು ಗಾಯಗೊಂಡಿದ್ದರು.