ಬುದೌನ್: ಉತ್ತರ ಪ್ರದೇಶದ ಬದೌನ್ನಲ್ಲಿ ಪತ್ನಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ನೀರಿನ ಟ್ಯಾಂಕ್ ನಲ್ಲಿಟ್ಟಿದ್ದ ಪತಿ ಹಾಗೂ ಆತನ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು ಸತ್ಯವತಿ ಯಾದವ್(26) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಜೈ ಸಿಂಗ್ ಯಾದವ್, ಜೂನ್ 1 ಮಧ್ಯರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿ, ನಾಪತ್ತೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸರ್ಕಲ್ ಆಫೀಸರ್ ಅಂಶುಮಾನ್ ಶ್ರೀವಾಸ್ತವ ಅವರ ಪ್ರಕಾರ, ಪ್ರಮುಖ ಆರೋಪಿ ಜೈ ಸಿಂಗ್ ಯಾದವ್, ತನ್ನ ವಿವಾಹೇತರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಆಕೆಯನ್ನು ಕೊಲ್ಲಲು ನಿರ್ಧರಿಸಿದನು ಎಂದು ಅವರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪತಿಯ ಇತರ ನಾಲ್ವರು ಸಂಬಂಧಿಕರು ಸಹ ಕೃತ್ಯಕ್ಕೆ ಸಹಾಯ ಮಾಡಿರುವು ತಿಳಿದು ಬಂದಿದೆ. ಅವರಲ್ಲಿ,ಜೈ ಸಿಂಗ್ ಯಾದವ್ ಮತ್ತು ಇಬ್ಬರು ಸಂಬಂಧಿಕರಾದ ರಂಭನ್ ಯಾದವ್ ಮತ್ತು ಚಂದೇಲೆ ಯಾದವ್ ಅಲಿಯಾಸ್ ಝಕಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಸರ್ವೇಶ್ ಯಾದವ್ ಮತ್ತು ವಿಜಯ್ ಯಾದವ್ ಅಲಿಯಾಸ್ ಛೋಟೆ ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತಿ, ಶವವನ್ನು ಕೆಲವು ದಿನಗಳ ಕಾಲ ಮನೆಯ ನೀರಿನ ಟ್ಯಾಂಕ್ನಲ್ಲಿ ಬಚ್ಚಿಟ್ಟು, ನಂತರ ಅದನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಸಾಕ್ಷ್ಯಗಳನ್ನು ನಾಶಮಾಡಲು ಅವಶೇಷಗಳನ್ನು ಸೋಟ್ ನದಿಗೆ ಎಸೆದಿದ್ದಾರೆ.
ವೈಜ್ಞಾನಿಕ ಪುರಾವೆಗಳ ಸಹಾಯದಿಂದ ಪ್ರಕರಣವನ್ನು ಭೇದಿಸಲಾಗಿದ್ದು, ನಿರಂತರ ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.