ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಮುಂದಿನ ಆದೇಶದವರೆಗೆ ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸುವುದನ್ನು ತಪ್ಪಿಸಲು ಸಮುದ್ರ ಆಡಳಿತ ನಿರ್ದೇಶನಾಲಯ (DGMA) ಹಡಗು ಮಾಲೀಕರು, ಹಡಗು ವ್ಯವಸ್ಥಾಪಕರು ಮತ್ತು ನೇಮಕಾತಿ ಮತ್ತು ನಿಯೋಜನೆ ಸೇವಾ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ ಮತ್ತು ಅದಕ್ಕೆ ಹೊಂದಿಕೊಂಡ ಕರಾವಳಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹಡಗುಗಳ ಮುಖ್ಯಸ್ಥರು ಹೆಚ್ಚಿನ ಮಟ್ಟದ ಭದ್ರತೆಯನ್ನು ವಹಿಸಬೇಕು ಎಂದು DGMA ಸಲಹೆಯಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ಹಡಗು ಮತ್ತು ಬಂದರು ಭದ್ರತೆ (ISPS) ಸಂಹಿತೆಗೆ ಅನುಗುಣವಾಗಿ ನೌಕಾಯಾನ ಎಚ್ಚರಿಕೆಗಳು, ಭದ್ರತಾ ಸಲಹೆಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ನೀಡುವ ಸೂಚನೆಗಳ ಮೇಲೆ ನಿಗಾವಹಿಸಲು ಮತ್ತು ಎಲ್ಲಾ ಹಡಗು ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸಲು ಅವರಿಗೆ ನಿರ್ದೇಶಿಸಲಾಗಿದೆ.
ಹಡಗು ಮಾಲೀಕರು, ಹಡಗು ವ್ಯವಸ್ಥಾಪಕರು ಮತ್ತು ನೇಮಕಾತಿ ಮತ್ತು ನಿಯೋಜನೆ ಸೇವಾ ಪರವಾನಗಿ (RPSL) ಕಂಪನಿಗಳು ಮುಂದಿನ ಆದೇಶದವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸುವುದನ್ನು ತಪ್ಪಿಸಲು ನಿರ್ದೇಶಿಸಲಾಗಿದೆ ಎಂದು ಅದು ಹೇಳಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಈ ವಾರ 'ಎಂಟಿ ಅಲ್ ಬಹಿಯಾ' (MT Al Bahiyah) ಮತ್ತು 'ಎಂಟಿ ಮೊಂಬಾಸಾ' (MT Mombasa) ಎಂಬ ಎರಡು ಹಡಗುಗಳ ಮೇಲೆ ನಡೆದ ದಾಳಿ ನಂತರ ಈ ಸಲಹೆಯನ್ನು ನೀಡಲಾಗಿದೆ. ಈ ಹಡಗುಗಳ ಒಟ್ಟು 46 ಸಿಬ್ಬಂದಿ ಪೈಕಿ 30 ಮಂದಿ ಭಾರತೀಯ ನಾವಿಕರಿದ್ದರು. 'ಎಂಟಿ ಅಲ್ ಬಹಿಯಾ' ಹಡಗಿನಲ್ಲಿದ್ದ ಒಬ್ಬ ಭಾರತೀಯ ನಾವಿಕ ಮೃತಪಟ್ಟರೆ, ಮತ್ತೊಬ್ಬರು ಗಾಯಗೊಂಡಿದ್ದರು. 'ಎಂಟಿ ಮೊಂಬಾಸಾ' ಹಡಗಿನಲ್ಲಿದ್ದ ಒಂಬತ್ತು ಭಾರತೀಯ ಪ್ರಜೆಗಳು ಗಾಯಗೊಂಡಿದ್ದರು.
ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಪ್ರತಿಯೊಂದು ಹಡಗಿನಲ್ಲೂ ಇರುವ ಭಾರತೀಯ ನಾವಿಕರ ಕುರಿತು ನೈಜ-ಸಮಯದ (real-time) ಮಾಹಿತಿಯನ್ನು ಒದಗಿಸಲು ಡ್ಯಾಶ್ಬೋರ್ಡ್ ಒಂದನ್ನು ಸ್ಥಾಪಿಸುವಂತೆ ಸರ್ಕಾರವು ಮಂಗಳವಾರ ನೌಕಾಯಾನ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ ಮತ್ತು ಒಮನ್ ಕೊಲ್ಲಿಯಲ್ಲಿ ಸಂಚರಿಸುವ ಪ್ರತಿಯೊಂದು ಹಡಗಿನಲ್ಲಿರುವ ಪ್ರತಿಯೊಬ್ಬ ಭಾರತೀಯರ ಮಾಹಿತಿಯನ್ನು ಪಡೆಯಲು, ಹಡಗು-ವಾರು ಸಮಗ್ರ ಕಾರ್ಯಾಚರಣಾ ಡ್ಯಾಶ್ಬೋರ್ಡ್ ಅನ್ನು ಸ್ಥಾಪಿಸುವಂತೆ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್ ಅವರು ಡಿಜಿಎಂಎ (DGMA) ಗೆ ಸೂಚಿಸಿದ್ದರು.