ಸೋನಂ ವಾಂಗ್ಚುಕ್ ಪರೀಕ್ಷಿಸುತ್ತಿರುವ ವೈದ್ಯರು 
ದೇಶ

'ನಾನು ಉಪವಾಸ ಅಂತ್ಯಗೊಳಿಸಿದರೆ ಯಾವ ಸಂದೇಶ ಹೋಗುತ್ತದೆ?': ಜು.20ಕ್ಕೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸೋನಂ ವಾಂಗ್ಚುಕ್ ಮನವಿ

ನಾನು ಊಟ ಮಾಡಿದರೆ ಯಾವ ಸಂದೇಶ ಹೋಗುತ್ತದೆ? ಸರ್ಕಾರಕ್ಕೆ ಉತ್ತರದಾಯಿತ್ವದ ಅಗತ್ಯವೇ ಇಲ್ಲ ಎಂಬ ಸಂದೇಶವೇ ಹೋಗುತ್ತದೆ. ಪ್ರತಿಭಟನಾಕಾರರು ಕುಳಿತುಕೊಂಡು ನಂತರ ಎದ್ದು ಹೋಗುತ್ತಾರೆ ಎಂಬ ಭಾವನೆ ಮೂಡುತ್ತದೆ. ನಾನು ಉಪವಾಸ ಮುಗಿಸಿದರೆ ಏನು ಬದಲಾಗುತ್ತದೆ ಎಂದು ಪ್ರಶ್ನಿಸಿದರು.

ನವದೆಹಲಿ: ರಾಜಕೀಯ ನಾಯಕರು, ಬೆಂಬಲಿಗರು ಹಾಗೂ ನ್ಯಾಯಾಲಯದ ಮಧ್ಯಸ್ಥಿಕೆ ಸೇರಿದಂತೆ ಹಲವು ಕಡೆಯಿಂದ ಮನವಿ ಬಂದಿದ್ದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೋರಾಟಗಾರ ಸೋನಂ ವಾಂಗ್ಚುಕ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಉಪವಾಸ ಸತ್ಯಾಗ್ರಹದ 18ನೇ ದಿನವಾದ ನಿನ್ನೆ ಬುಧವಾರ ರಾತ್ರಿ ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅವರು, ನಾನು ಊಟ ಮಾಡಿದರೆ ಯಾವ ಸಂದೇಶ ಹೋಗುತ್ತದೆ? ಸರ್ಕಾರಕ್ಕೆ ಉತ್ತರದಾಯಿತ್ವದ ಅಗತ್ಯವೇ ಇಲ್ಲ ಎಂಬ ಸಂದೇಶವೇ ಹೋಗುತ್ತದೆ. ಪ್ರತಿಭಟನಾಕಾರರು ಕುಳಿತುಕೊಂಡು ನಂತರ ಎದ್ದು ಹೋಗುತ್ತಾರೆ ಎಂಬ ಭಾವನೆ ಮೂಡುತ್ತದೆ. ನಾನು ಉಪವಾಸ ಮುಗಿಸಿದರೆ ಏನು ಬದಲಾಗುತ್ತದೆ ಎಂದು ಪ್ರಶ್ನಿಸಿದರು.

ಉಪವಾಸ ನಿಲ್ಲಿಸುವಂತೆ ಸಾವಿರಾರು ಸಂದೇಶಗಳು ಬಂದಿವೆ. ಹಲವು ಹಿರಿಯ ರಾಜಕೀಯ ನಾಯಕರು ಪ್ರೀತಿ ಮತ್ತು ಕಾಳಜಿಯಿಂದ ಭೇಟಿಯಾಗಿ ಮನವಿ ಮಾಡಿದ್ದಾರೆ. ಕೆಲವರು ನನಗೆ ಆಹಾರ ಸೇವಿಸಲು ಸೂಚಿಸುವಂತೆ ನ್ಯಾಯಾಲಯದ ಮೊರೆಗೂ ಹೋಗಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಆರೋಗ್ಯದ ಕುರಿತು ವ್ಯಕ್ತವಾಗಿರುವ ಆತಂಕಕ್ಕೆ ಪ್ರತಿಕ್ರಿಯಿಸಿದ ವಾಂಗ್ಚುಕ್, ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೇ ತಕ್ಷಣದ ಅಪಾಯ ಕಂಡುಬಂದಿಲ್ಲ ಎಂದು ತಿಳಿಸಿದರು.

ಇನ್ನೆರಡು-ನಾಲ್ಕು ದಿನಗಳಲ್ಲಿ ನಾನು ಸಾಯುವಂತಹ ಪರಿಸ್ಥಿತಿ ಇಲ್ಲ. 18 ದಿನಗಳ ಉಪವಾಸದ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳ ವರದಿಗಳು ಸಾಮಾನ್ಯವಾಗಿವೆ. ಇಸಿಜಿ ಪರೀಕ್ಷೆಯ ಫಲಿತಾಂಶವೂ ಉತ್ತಮವಾಗಿದೆ. ಇನ್ನೂ ಹಲವು ದಿನಗಳವರೆಗೆ ಉಪವಾಸ ಮುಂದುವರಿಸಬಹುದು. ಹೌದು, ದೌರ್ಬಲ್ಯ ಇದೆ, ಸ್ನಾಯುಗಳು ದುರ್ಬಲವಾಗುತ್ತಿವೆ. ಆದರೆ ಹೃದಯ ಹಾಗೂ ದೇಹದ ಪ್ರಮುಖ ಅಂಗಗಳು ಇನ್ನೂ ಚೆನ್ನಾಗಿವೆ ಎಂದು ಹೇಳಿದರು.

ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡುವ ಬದಲು, ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ 'ಚಲೋ ಸಂಸತ್' ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಬಲಿಗರಿಗೆ ಅವರು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ಜುಲೈ 20ನ್ನು ಅನುಭವಾತ್ಮಕ ಶಿಕ್ಷಣ ದಿನವನ್ನಾಗಿ ಆಚರಿಸುವಂತೆ ಎಲ್ಲ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ನೈಜ ಪಾಠವನ್ನು ಕಣ್ತುಂಬಿಕೊಳ್ಳಲು ಇದು ಅವಕಾಶವಾಗಲಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಭಾಗವಹಿಸಲು ಅಭಿಯಾನದ ವೆಬ್‌ಸೈಟ್ ಅಥವಾ ಮಿಸ್ಡ್ ಕಾಲ್ ಸೌಲಭ್ಯದ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.

ಜುಲೈ 20ರಂದು ಸಾವಿರಾರು ಸಂಖ್ಯೆಯಲ್ಲಿ ಬನ್ನಿ. ಈ ವಿಷಯವನ್ನು ಒಟ್ಟಾಗಿ ಸಂಸತ್ತಿನ ಕೈಗೆ ಒಪ್ಪಿಸೋಣ. ಆಗ ಮಾತ್ರ ಅದು ಸರಿಯಾದ ವೇದಿಕೆಗೆ ತಲುಪಿದೆ ಎಂಬ ನಂಬಿಕೆ ನನಗೆ ಬರುತ್ತದೆ ಎಂದು ವಾಂಗ್ಚುಕ್ ಹೇಳಿದರು.

ಕಾಕ್ರೋಚ್ ಜನತಾ ಪಾರ್ಟಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20ರಂದು 'ಚಲೋ ಸಂಸತ್' ಮೆರವಣಿಗೆಗೂ ಪಕ್ಷ ಕರೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

9ನೇ ತರಗತಿಯಿಂದಲ್ಲ, ನಿಮ್ಮ ತ್ರಿಭಾಷಾ ಸೂತ್ರವನ್ನು 5-6 ನೇ ಕ್ಲಾಸ್ ನಿಂದ ಜಾರಿಗೆ ತನ್ನಿ: CBSE ನಿಯಮದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ

ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಪರಿಷತ್ ಸದಸ್ಯತ್ವ ರದ್ದು; ಗಾಯತ್ರಿ ಶಾಂತೇಗೌಡ ಮೇಲುಗೈ!

'ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ'; Sonam Wangchuk ಆರೋಗ್ಯದ ಮೇಲೆ ಪ್ರತಿದಿನ ನಿಗಾ ವಹಿಸಿ: Delhi High court ಆದೇಶ

Hormuz ಉದ್ವಿಗ್ನತೆ ಮತ್ತಷ್ಟು ತೀವ್ರ: Iran ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ; ಟೆಹ್ರಾನ್ ಪ್ರತೀಕಾರ, ಬಹ್ರೇನ್-ಕುವೈತ್ ಗುರಿಯಾಗಿಸಿ ಕ್ಷಿಪಣಿಗಳ ಸುರಿ ಮಳೆ..!

'ನಾವು ತಪ್ಪು ಮಾಡಿದೆವು...': Epstein ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance, Trump ಆಡಳಿತಕ್ಕೆ ತೀವ್ರ ಮುಜುಗರ..!