ನವದೆಹಲಿ: ಗಾಜಿಯಾಬಾದ್ನಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಾಯಗೊಂಡು ಸಾವನ್ನಪ್ಪಿದ ನಾಲ್ಕು ವರ್ಷದ ಸಂತ್ರಸ್ತೆಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪ ಎದುರಿಸುತ್ತಿರುವ ವೈದ್ಯರೊಬ್ಬರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಚೀಮಾರಿ ಹಾಕಿದ್ದು, ಖಾಸಗಿ ಆಸ್ಪತ್ರೆ ಮತ್ತು ಅದರ ವೈದ್ಯರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಸುಪ್ರೀಂ ಪೀಠ, ವೈದ್ಯರ ವೈದ್ಯಕೀಯ ನೀತಿಯನ್ನು ಪ್ರಶ್ನಿಸಿದ್ದು, ಆಸ್ಪತ್ರೆಯ ಅಮಾನವೀಯ ನಡವಳಿಕೆಗೆ ದಂಡ ವಿಧಿಸಿದರೆ ಅದು ಭಯಾನಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.
"ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ ನಿಮ್ಮ ಹೆಸರಿನೊಂದಿಗೆ 'ವೈದ್ಯ' ಎಂದು ಬರೆಯುವ ಅಗತ್ಯವಿಲ್ಲ. ನಿಮಗೆ ಸೂಕ್ಷ್ಮತೆಯಿದ್ದರೆ, ನಿಮ್ಮಲ್ಲಿ ಸೌಲಭ್ಯವಿಲ್ಲದಿದ್ದರೆ ಆ ಮಗುವಿನೊಂದಿಗೆ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದಿರಿ. ಅವಳು ಬಡವಳಾಗಿದ್ದರಿಂದ ನೀವು ನಿರ್ಲಕ್ಷಿಸಿದ್ದೀರಾ? ನಿಮ್ಮ ಶುಲ್ಕವನ್ನು ಭರಿಸಲು ಸಾಧ್ಯವಾಗಲಿಲ್ಲವೇ?" ಎಂದು ಸುಪ್ರೀಂ ಕೋರ್ಟ್ ಖಾರವಾಗಿಯೇ ಆಸ್ಪತ್ರೆಯ ಪರ ವಕೀಲರಿಗೆ ಪ್ರಶ್ನಿಸಿದೆ.
ಅಂತಹ ಪರಿಸ್ಥಿತಿಯಲ್ಲಿ ಯಾವುದೇ ವೈದ್ಯರು ಮಗುವಿಗೆ ತಕ್ಷಣವೇ ವೈದ್ಯಕೀಯ ನೆರವು ಸಿಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯವು ಸೂಚಿಸಿದೆ.
"ಇಂತಹ ಘೋರ ಅಪರಾಧಕ್ಕೆ ಬಲಿಯಾದ ಮಗುವನ್ನು ನಿಮ್ಮ ಮುಂದೆ ತರಲಾಗಿದೆ. ಆದರೆ ಕರುಣೆಯಿಲ್ಲದ ನೀವು ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ್ದೀರಿ. ನಿಮಗೆ ಯಾವುದೇ ಸಹಾನುಭೂತಿ ಇದ್ದಿದ್ದರೆ ನೀವೇ ಅವಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಿರಿ" ಎಂದು ಸಿಜೆಐ ಟೀಕಿಸಿದ್ದಾರೆ.
"ನಾವು ದಂಡ ವಿಧಿಸಿದರೆ ಅದು ಭಯಾನಕ ಪರಿಣಾಮವನ್ನು ಬೀರುತ್ತದೆ. ನೀವು ಅತ್ಯಂತ ನಿರ್ದಯವಾಗಿ ವರ್ತಿಸಿದ್ದೀರಿ" ಎಂದು ನ್ಯಾಯಾಲಯ ಹೇಳಿದೆ.
ಗಾಜಿಯಾಬಾದ್ನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮುಂದಿನ ಮಂಗಳವಾರ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.