ಬಿಜೆಪಿ ಸೇರ್ಪಡೆ ಬೆನ್ನಲ್ಲೇ TMC ಮಾಜಿ ಸಂಸದರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆ! 
ದೇಶ

ದೀದಿಗೆ ಗಾಯದ ಮೇಲೆ ಬರೆ: ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮೂವರು TMC ಮಾಜಿ ಸಂಸದರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆ!

ಶುಕ್ರವಾರ ನಾಮಪತ್ರ ಹಿಂಪಡೆಯುವ ಗಡುವು ಮುಕ್ತಾಯಗೊಂಡಾಗ, ಸ್ಪರ್ಧೆಯಲ್ಲಿ ಬೇರೆ ಯಾವುದೇ ಅಭ್ಯರ್ಥಿಗಳು ಉಳಿಯದ ಕಾರಣ ಈ ಮೂವರನ್ನೂ ಅವಿರೋಧವಾಗಿ ಆಯ್ಕೆಯಾದವರಾಗಿ ಘೋಷಿಸಲಾಯಿತು.

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಬಿಜೆಪಿ ಸೇರ್ಪಡೆಯಾದ ಕೆಲವೇ ವಾರಗಳಲ್ಲಿ, ಮೂವರು ಮಾಜಿ ರಾಜ್ಯಸಭಾ ಸದಸ್ಯರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದಾರೆ.

ಹೌದು.. ಈ ಹಿಂದೆ ಟಿಎಂಸಿ ತೊರೆದಿದ್ದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಪಶ್ಚಿಮ ಬಂಗಾಳದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಾಮಪತ್ರ ಹಿಂಪಡೆಯುವ ಗಡುವು ಮುಕ್ತಾಯಗೊಂಡಾಗ, ಸ್ಪರ್ಧೆಯಲ್ಲಿ ಬೇರೆ ಯಾವುದೇ ಅಭ್ಯರ್ಥಿಗಳು ಉಳಿಯದ ಕಾರಣ ಈ ಮೂವರನ್ನೂ ಅವಿರೋಧವಾಗಿ ಆಯ್ಕೆಯಾದವರಾಗಿ ಘೋಷಿಸಲಾಯಿತು.

ಜುಲೈ 15ರಂದು ನಡೆದ ಪರಿಶೀಲನೆಯಲ್ಲಿ ಅವರ ನಾಮಪತ್ರಗಳು ಅಂಗೀಕಾರಗೊಂಡಿದ್ದವು. ನಂತರ ಚುನಾವಣಾಧಿಕಾರಿ (ರಿಟರ್ನಿಂಗ್ ಆಫೀಸರ್) ನೂತನ ರಾಜ್ಯಸಭಾ ಸದಸ್ಯರಿಗೆ ಚುನಾವಣಾ ಪ್ರಮಾಣಪತ್ರಗಳನ್ನು ವಿತರಿಸಿದರು.

ಈ ಮೂವರೂ ನಾಯಕರು ಜುಲೈ 9ರಂದು ಕೊಲ್ಕತ್ತಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದೇ ದಿನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಜುಲೈ 24ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಗೆ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿತ್ತು.

ಟಿಎಂಸಿಗೆ ಗಾಯದ ಮೇಲೆ ಬರೆ

ಇನ್ನು ಕಳೆದ ತಿಂಗಳು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲು ಕಂಡ ಬಳಿಕ, ಈ ಮೂವರು ತಮ್ಮ ರಾಜ್ಯಸಭಾ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ರಾಜ್ಯಸಭೆಯ ಮೂರು ಸ್ಥಾನಗಳು ತೆರವಾಗಿದ್ದು, ಅವುಗಳಿಗೆ ಉಪಚುನಾವಣೆ ಘೋಷಿಸಲಾಗಿತ್ತು.

ಟಿಎಂಸಿ ತೊರೆದ ಕೆಲವೇ ವಾರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಟಿಎಂಸಿ ನಾಯಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವ ಮೊದಲ ಪ್ರಮುಖ ಬೆಳವಣಿಗೆಯೂ ಇದಾಗಿದೆ. ಚುನಾವಣೆ ಬಳಿಕ ಟಿಎಂಸಿ ನಾಯಕರ ಸೇರ್ಪಡೆ ವಿಚಾರದಲ್ಲಿ ಎಚ್ಚರಿಕೆಯ ನಿಲುವು ತಾಳಿದ್ದ ಬಿಜೆಪಿ, ರಾಜಕೀಯವಾಗಿ ವಿಶ್ವಾಸಾರ್ಹರು ಹಾಗೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಪರಿಗಣಿಸಿದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ ಎಂಬ ಸಂದೇಶವನ್ನು ಈ ಬೆಳವಣಿಗೆ ನೀಡಿದೆ.

ಟಿಎಂಸಿಯ ಪ್ರಮುಖ ನಾಯಕರು

2012ರಿಂದ ಟಿಎಂಸಿಯನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದ್ದ ಸುಖೇಂದು ಶೇಖರ್ ರಾಯ್, ಪಕ್ಷದ ಪ್ರಮುಖ ಕಾನೂನು ಹಾಗೂ ಸಂಸದೀಯ ತಂತ್ರಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿತ್ತು. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ, ತಮ್ಮದೇ ಪಕ್ಷದ ವಿರುದ್ಧ ಜವಾಬ್ದಾರಿತನದ ಪ್ರಶ್ನೆ ಎತ್ತಿದ್ದ ಅವರು ಪಕ್ಷದೊಳಗೇ ಟೀಕೆಗೆ ಗುರಿಯಾಗಿದ್ದರು.

ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಬಳಿಕ ಅಳಿಸಿದರೂ, ಆ ಘಟನೆ ಪಕ್ಷದ ನಾಯಕತ್ವದೊಂದಿಗಿನ ಅವರ ಭಿನ್ನಾಭಿಪ್ರಾಯವನ್ನು ಮತ್ತಷ್ಟು ತೀವ್ರಗೊಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ಇನ್ನು ಸುಶ್ಮಿತಾ ದೇವ್, ಅಸ್ಸಾಂನ ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದೆ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆಯಾಗಿದ್ದರು. 2021ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದ ಅವರು, ಬಳಿಕ ಟಿಎಂಸಿ ನಾಯಕತ್ವದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಬಿಜೆಪಿಗೆ ಸೇರ್ಪಡೆಯಾದರು.

ಅಂತೆಯೇ ಪ್ರಕಾಶ್ ಚಿಕ್ ಬರೈಕ್ ಅವರೂ ಕೂಡ ಟಿಎಂಸಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ, ಕಳೆದ ತಿಂಗಳು ರಾಜ್ಯಸಭಾ ಸದಸ್ಯತ್ವ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಳಿಕ ಬಿಜೆಪಿಗೆ ಸೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿಗೆ ಬಿಜೆಪಿ ಗಾಳ? Video

ಅಕ್ರಮ ಸಂಬಂಧಕ್ಕೆ ಅಡ್ಡಿ: ದೇವಸ್ಥಾನಕ್ಕೆಂದು ಕರೆದೊಯ್ದು ಪತಿಯನ್ನೇ ಕೊಂದ ಪಾಪಿ ಪತ್ನಿ!

ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ: ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್‌ಚುಕ್!

ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆ, 60 ಯುಎಸ್ ಸೆನೆಟರ್‌ಗಳ ಬೆಂಬಲ!