ನವದೆಹಲಿ: ಕೇಂದ್ರ ಸರ್ಕಾರ ಯುವಜನತೆಯ ಹೋರಾಟವನ್ನು ಹತ್ತಿಕ್ಕುತ್ತಿದ್ದು, ಬಂಧನಕ್ಕೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗಡೆ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಈ ದೇಶದ ಯುವ ಜನತೆಯ ಭವಿಷ್ಯಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಯುವಜನತೆಯ ಹೋರಾಟ ಹತ್ತಿಕ್ಕುತ್ತಿರುವುದು ದುರಾದೃಷ್ಟಕರ. ನಮಗೆ ನ್ಯಾಯ ಬೇಕು. ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ಯುವ ಸಮೂಹ ಈ ದೇಶದ ಭವಿಷ್ಯ. ಹೋರಾಟ ಅವರ ಹಕ್ಕು. ಅವರಿಗೆ ರಕ್ಷಣೆ ನೀಡುವುದು ನಮ್ಮ ಸಂವಿಧಾನದ ಹಕ್ಕು. ನಾವೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಈಗ ಬಲವಂತವಾಗಿ ಅವರು ನಮ್ಮನ್ನು ತಡೆಯಲು, ಬಂಧಿಸಲು ಪ್ರಯತ್ನಿಸುತ್ತಿದ್ದಾರೆ" ಎಂದರು.
ಬಂಧನಕ್ಕೆ ಹೆದರುವುದಿಲ್ಲ: ಸುಮಾರು ನೂರಕ್ಕೂ ಹೆಚ್ಚು ಸಂಸತ್ ಸದಸ್ಯರು ಸೇರಿ ಪ್ರತಿಭಟಿಸುತ್ತಿದ್ದಾರೆ. ಈ ಬಂಧನಕ್ಕೆಲ್ಲಾ ಯಾರೂ ಹೆದರುವುದಿಲ್ಲ. ನಾವು ಅದನ್ನು ಎದುರಿಸುತ್ತೇವೆ. ನಮಗೆ ನ್ಯಾಯ ಬೇಕು. ಈ ದೇಶದ ಯುವಕರು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಿದರು
ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಎಷ್ಟು ನೋವನ್ನು ಅನುಭವಿಸಿದ್ದಾರೆಂದು ಮಾಧ್ಯಮಗಳು ನೋಡಿವೆ. ಈ ದೇಶದ ಭವಿಷ್ಯ ಅವರಲ್ಲಿದೆ ಎಂದು ಹೇಳಿದರು.