ನವದೆಹಲಿ: NEET ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನು ತೀವ್ರಗೊಳಿಸಿವೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದರೆ, ಈ ವ್ಯವಸ್ಥೆಯು ದೇಶದ ಯುವಜನತೆಗೆ ಅನ್ಯಾಯವೆಸಗಿದೆ ಎಂದು 'ಮಕ್ಕಳ್ ನೀಧಿ ಮೈಯಮ್' (MNM) ಸಂಸ್ಥಾಪಕ ಕಮಲ್ ಹಾಸನ್ ಆರೋಪಿಸಿದ್ದಾರೆ.
ಈ ವಿವಾದವನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಇಬ್ಬರೂ ನಾಯಕರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಉತ್ತರವನ್ನು ಬಯಸಿದರೆ, ಕಮಲ್ ಹಾಸನ್ ವಿದ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರ ನೀಡಿದ ಪ್ರತಿಕ್ರಿಯೆಯನ್ನು ಟೀಕಿಸಿದ್ದು, ಹೆಚ್ಚಿನ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, NEET ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಮತ್ತು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡದಿರುವುದನ್ನು ಪ್ರಶ್ನಿಸಿದರು.
"ವಿದ್ಯಾರ್ಥಿಗಳ ಮೇಲೆ ಯಾಕೆ ಲಾಠಿಚಾರ್ಜ್ ಮಾಡಲಾಯಿತು ಎಂದು ನೀವು ಅಮಿತ್ ಶಾ ಅವರನ್ನು ಕೇಳಿದಿರಾ? ಮಕ್ಕಳು ಏಕೆ ಆಸ್ಪತ್ರೆಯಲ್ಲಿದ್ದಾರೆ? ಯಾಕೆ..ಈ ವಿದ್ಯಾರ್ಥಿಗಳು ಭಯೋತ್ಪಾದಕರೇ?" ಎಂದು ಅವರು ಪ್ರಶ್ನಿಸಿದರು.
"ಸರ್ಕಾರಕ್ಕೆ ಈ ಪ್ರಶ್ನೆಗಳನ್ನು ಕೇಳಿದಾಗ, ನಾನು ಅವುಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಸರ್ಕಾರದ ಉನ್ನತ ಮಟ್ಟದಿಂದಲೇ ಹೊಣೆಗಾರಿಕೆಯನ್ನು ಒತ್ತಾಯಿಸಿದರು, ಪ್ರಶ್ನೆಪತ್ರಿಕೆ ಸೋರಿಕೆ ಏಕೆ ಸಂಭವಿಸಿತು?ಎಂಬುದಕ್ಕೆ ಶಿಕ್ಷಣ ಸಚಿವರು ಉತ್ತರಿಸಬೇಕು. ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಯಾಕೆ ಹೊಣೆಗಾರರನ್ನಾಗಿ ಮಾಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ಸಂಸತ್ ಕಲಾಪಕ್ಕೆ ಉಂಟಾದ ಅಡಚಣೆಗೆ ಕೇಂದ್ರವೇ ಕಾರಣ ಎಂದು ಆರೋಪಿಸಿದ ಪ್ರಿಯಾಂಕಾ ಗಾಂಧಿ, ಸಂಬಂಧಪಟ್ಟ ಸಚಿವರು ಯಾವಾಗ ರಾಜೀನಾಮೆ ನೀಡಲಿದ್ದಾರೆ. ಈ ವಿವಾದದ ಹೊಣೆಯನ್ನು ಯಾರು ಹೊರಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ರಾಜ್ಯಸಭಾ ಸದಸ್ಯ ಹಾಗೂ ಎಂಎನ್ಎಂ (MNM) ಸಂಸ್ಥಾಪಕ ಕಮಲ್ ಹಾಸನ್ ಕೂಡ ನೀಟ್ (NEET) ವಿಷಯ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಕೇಂದ್ರವನ್ನು ಟೀಕಿಸಿದ್ದಾರೆ.
"ಮಗುವೊಂದು ಅತ್ತಾಗ ನಾವು ಅದರ ಮಾತನ್ನು ಆಲಿಸಬೇಕಿತ್ತು. ಆದರೆ, ಬದಲಿಗೆ ನಮ್ಮ ಅನೇಕ ಮಕ್ಕಳು ಸಾವನ್ನಪ್ಪುವವರೆಗೂ ನಾವು ಕಾಯುತ್ತಲೇ ಹೋದೆವು. ಕಲಿಕೆಯ ಜಾಗದಲ್ಲಿ ತರಬೇತಿಯನ್ನು (ಕೋಚಿಂಗ್), ಕುತೂಹಲದ ಜಾಗದಲ್ಲಿ ಆತಂಕವನ್ನು ಮತ್ತು ಬುದ್ಧಿವಂತಿಕೆಯ ಜಾಗದಲ್ಲಿ ಅಪರಾಧ ಪ್ರವೃತ್ತಿಯನ್ನು ತರುವ ವ್ಯವಸ್ಥೆಯು ಸಂಪೂರ್ಣ ವೈಫಲ್ಯವಾಗಿದೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಗಳು ಸಿಗುವ ಬದಲು ತಡೆಗೋಡೆಗಳು ಮತ್ತು ಲಾಠಿ ಏಟುಗಳು ಸಿಗುವಂತಾದಾಗ ದೇಶವು ವಿಫಲವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಸದ್ಯ ನಡೆಯುತ್ತಿರುವ ಹೋರಾಟದಲ್ಲಿ ದೇಶಕ್ಕೆ ಅವರ "ಅಂತಃಕರಣದ ಧ್ವನಿ"ಯ ಅಗತ್ಯವಿದೆ ಎಂದು ಹೇಳುತ್ತಾ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆಯೂ ಹಾಸನ್ ಮನವಿ ಮಾಡಿದ್ದಾರೆ.