ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ವಿದ್ಯಾರ್ಥಿಗಳಿಗೆ ದೊರೆತ "ಜಯ" ಎಂದು ಬಣ್ಣಿಸಿರುವ ರಾಹುಲ್ ಗಾಂಧಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ ಹಾಗೂ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಹಿಂದೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೆಮ್ಮೆಯ ವಿಷಯವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಅದನ್ನು ಪುನರ್ ನಿರ್ಮಿಸಲು ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆರ್ಎಸ್ಎಸ್ (RSS)ಭಾರತದ ಶಿಕ್ಷಣ ವ್ಯವಸ್ಥೆಯನ್ನು "ವಶಪಡಿಸಿಕೊಳ್ಳುತ್ತಿದೆ" ಮತ್ತು "ಒಳಗೆ ಪೊಳ್ಳಾಗಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಮೊದಲನೆಯದಾಗಿ, ಇದು ನಮ್ಮ ವಿದ್ಯಾರ್ಥಿಗಳ ಗೆಲುವು. ಇವರೇ ಭಾರತದ ಭವಿಷ್ಯ. ಭಾರತದ ಶಿಕ್ಷಣ ವ್ಯವಸ್ಥೆಯು ವರ್ಷಗಳಿಂದ ದಾಳಿಗೆ ಒಳಗಾಗುತ್ತಿದೆ ಮತ್ತು ಅದನ್ನು "ವಶಪಡಿಸಿಕೊಳ್ಳಲಾಗುತ್ತಿದೆ" ಹಾಗೂ "ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಹಿಂದೊಮ್ಮೆ ನಮ್ಮ ಶಿಕ್ಷಣ ವ್ಯವಸ್ಥೆ ಹೆಮ್ಮೆಯ ವಿಷಯವಾಗಿತ್ತು. ಭಾರತದ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ ಎಂದು ಇಡೀ ಜಗತ್ತೇ ಒಪ್ಪಿಕೊಂಡಿತ್ತು. ಈಗ ಅದು ವರ್ಷಗಳಿಂದ ದಾಳಿಗೆ ಒಳಗಾಗಿದೆ. ಅದನ್ನು ವಶಪಡಿಸಿಕೊಳ್ಳಲಾಗುತ್ತಿದೆ ಮತ್ತು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಪ್ರಧಾನ್ ಹದಗೆಡುತ್ತಿರುವ ಶಿಕ್ಷಣ ವ್ಯವಸ್ಥೆಯ ಸಂಕೇತ, ಭ್ರಷ್ಟಾಚಾರದ ಸಂಕೇತ, ಶಿಕ್ಷಣ ವ್ಯವಸ್ಥೆಯ ನಾಶದ ಸಂಕೇತ, ಅಸಮರ್ಥತೆಯ ಸಂಕೇತ. ಅವರು ಹೋಗಲೇಬೇಕಿತ್ತು. ಅವರು ಹೋಗಿರುವುದು ಒಳ್ಳೆಯದೇ ಆಯಿತು ಎಂದರು.
ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ:
ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ ಬಳಸಿದ್ದಕ್ಕೆ ರಾಹುಲ್ ಗಾಂಧಿ ನೇರವಾಗಿ ಅಮಿತ್ ಶಾ ಅವರನ್ನು ದೂಷಿಸಿದರು. ಅಮಿತ್ ಶಾ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತೇವೆ. ನಮ್ಮ ವಿದ್ಯಾರ್ಥಿಗಳ ಮೇಲೆ ಗನ್ ಬಳಸಲು ಅವರೇ ಅನುಮತಿ ನೀಡಿದ್ದಾರೆ. ಸಂಸತ್ತಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಆರ್ಎಸ್ಎಸ್ ಶಿಕ್ಷಣ ವ್ಯವಸ್ಥೆಯನ್ನು ತಿಂದುಹಾಕುತ್ತಿದೆ
"ನಮಗೆ ಇದೊಂದು ಮೂಲಭೂತ ವಿಷಯವಾಗಿದೆ. ನಮ್ಮದೇ ಪಡೆಗಳು ಭಾರತದ ಭವಿಷ್ಯದ ಮೇಲೆ ಗುಂಡು ಹಾರಿಸುವುದನ್ನು ನಾವು ಸಹಿಸುವುದಿಲ್ಲ. ಹಾಗಾಗಿ, ಸಂಸತ್ತಿನಲ್ಲಿ ಇದು ಪ್ರಮುಖ ವಿಷಯವಾಗಲಿದೆ. ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕ್ಷಮೆಯಾಚನೆಯನ್ನು ಒತ್ತಾಯಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಸರ್ಕಾರವು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು. ದೇಶದ ಶಿಕ್ಷಣ ವ್ಯವಸ್ಥೆಯನ್ನು ಆರ್ಎಸ್ಎಸ್ (RSS) ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಅದಕ್ಕೆ ಹಾನಿ ಉಂಟುಮಾಡಿದೆ. ಆರ್ಎಸ್ಎಸ್ ಗೆದ್ದಲು ಹುಳುಗಳಂತೆ ಶಿಕ್ಷಣ ವ್ಯವಸ್ಥೆಯನ್ನು ತಿಂದುಹಾಕುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
'ವಿದ್ಯಾರ್ಥಿಗಳ ಇನ್ನೂ ಎರಡು ಬೇಡಿಕೆಗಳಿವೆ: ಪ್ರಧಾನ್ ಅವರ ರಾಜೀನಾಮೆಯು ವಿದ್ಯಾರ್ಥಿಗಳು ಮುಂದಿಟ್ಟಿದ್ದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಲ್ಲ ಮತ್ತು ಇನ್ನೂ ಎರಡು ಬೇಡಿಕೆಗಳು ಬಾಕಿ ಉಳಿದಿವೆ ಎಂದು ರಾಹುಲ್ ಗಾಂಧಿ ಹೇಳಿದರು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪವಿರುವವರ ವಿರುದ್ಧ ಕೈಗೊಂಡ ಕ್ರಮವನ್ನು ಬಹಿರಂಗಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ವಿದ್ಯಾರ್ಥಿಗಳನ್ನು ಥಳಿಸಿದ ಅಥವಾ ಅವರ ಮೇಲೆ ಗುಂಡು ಹಾರಿಸಿದ ಆರೋಪವಿರುವವರನ್ನು, ಹಾಗೆಯೇ ಆ ಕೃತ್ಯವನ್ನು ಸಂಘಟಿಸಿದ ಮತ್ತು ಜಾರಿಗೆ ತಂದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಈ ಹಿಂದೆ ಹೇಳಿದ್ದರು. "ಕ್ರೂರ ದೌರ್ಜನ್ಯ ಮತ್ತು ಹಲ್ಲೆಗೆ" ಒಳಗಾದ ವಿದ್ಯಾರ್ಥಿಗಳ ಬಳಿ ಪ್ರಧಾನ ಮಂತ್ರಿಗಳು ಕ್ಷಮೆ ಯಾಚಿಸಬೇಕು ಎಂದೂ ರಾಹುಲ್ ಗಾಂಧಿ ಹೇಳಿದರು.
'ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ವಿದ್ಯಾರ್ಥಿಗಳು'
ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪುನರ್ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನ್ ಅವರ ರಾಜೀನಾಮೆಯು ಒಂದು "ದೊಡ್ಡ ಹೆಜ್ಜೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಸ್ತೆಗಿಳಿದು ಹೋರಾಡಿದ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಅಭಿನಂದಿಸಿದ ಅವರು, ಇವರು "ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದಾರೆ", "ದೇಶದ ಭವಿಷ್ಯಕ್ಕಾಗಿ ಹೋರಾಡಿದ್ದಾರೆ" ಮತ್ತು "ಸಂವಿಧಾನವನ್ನು ರಕ್ಷಿಸಿದ್ದಾರೆ" ಎಂದು ಹೇಳಿದರು. ಈ ರಾಜೀನಾಮೆಯು ರೈತರು, ಕಾರ್ಮಿಕರು ಮತ್ತು ಬಡವರು ಸೇರಿದಂತೆ ಸಮಾಜದ ಇತರ ವರ್ಗಗಳಿಗೆ, ಧೈರ್ಯದಿಂದ ಎದ್ದು ನಿಲ್ಲುವುದರಲ್ಲಿ ವಿವೇಕ ಮತ್ತು ಶೌರ್ಯವಿದೆ" ಎಂಬ ಸಂದೇಶವನ್ನು ರವಾನಿಸಬೇಕು ಎಂದೂ ಅವರು ಹೇಳಿದರು.
ವಿದ್ಯಾರ್ಥಿ ಚಳುವಳಿಯು ಕೇವಲ ಶಿಕ್ಷಣ ಸಚಿವರ ಬಗ್ಗೆ ಮಾತ್ರವಲ್ಲದೆ, ನಿರುದ್ಯೋಗ, ಭಾರತದ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿ ಮತ್ತು ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗದ ಆರೋಪಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.