ನವದೆಹಲಿ: ಶಿಕ್ಷಣ ಸುಧಾರಣೆ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಣೆಗಾರಿಕೆ ನಿಗದಿಪಡಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು, ಸಫ್ದರ್ಜಂಗ್ ಆಸ್ಪತ್ರೆಯಿಂದ ಮೆದಾಂಕ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವ ವೇಳೆ ಅಧಿಕಾರಿಗಳು ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.
ಶುಕ್ರವಾರ ತಡರಾತ್ರಿ ಯೂಟ್ಯೂಬ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ ವಾಂಗ್ಚುಕ್, ಕಳೆದ ಕೆಲವು ದಿನಗಳ ಅನುಭವವನ್ನು ಹಂಚಿಕೊಂಡಿದ್ದು, ದೆಹಲಿ ಹೈಕೋರ್ಟ್ ಅನುಮತಿ ನೀಡಿದ ಬಳಿಕ ಸಫ್ದರ್ಜಂಗ್ ಆಸ್ಪತ್ರೆಯಿಂದ ಹೊರಡುವ ವೇಳೆ ನಡೆದ ಘಟನೆಗಳ ದೃಶ್ಯಗಳನ್ನೂ ಪ್ರಕಟಿಸಿದ್ದಾರೆ. ಆದರೆ, ಈ ಆರೋಪಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಆಡಳಿತ ತಳ್ಳಿಹಾಕಿದ್ದು, ಹೈಕೋರ್ಟ್ನ ಲಿಖಿತ ಆದೇಶ ಆಸ್ಪತ್ರೆಗೆ ತಲುಪುವ ಮುನ್ನವೇ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಜೂನ್ 28ರಿಂದ ದೆಹಲಿಯ ಜಂತರ್ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಈ ಪ್ರತಿಭಟನೆಯಲ್ಲಿ ಮುಂದಿರಿಸಲಾಗಿತ್ತು.
ಜುಲೈ 18ರಂದು ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನು ಜಂತರ್ಮಂತರ್ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಸ್ಥಳಾಂತರಿಸಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಜುಲೈ 21ರಂದು ಅವರನ್ನು ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ವಿಡಿಯೋ ವೈರಲ್
ವಿಡಿಯೋದಲ್ಲಿ ಸಫ್ದರ್ಜಂಗ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಂದಿಗೆ ವಾಂಗ್ಚುಕ್ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ. ಆಸ್ಪತ್ರೆಯಿಂದ ಹೊರಹೋಗಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ವೇಳೆ ಪೊಲೀಸರ ವಿರುದ್ಧವೇ ಗರಂ ಆದ ವಾಂಗ್ಚುಕ್, "ನನ್ನನ್ನು ಬಂಧಿಸಿ ಅಥವಾ ಹೋಗಲು ಬಿಡಿ. ನೀವು ನನಗೆ ಕಿರುಕುಳ ನೀಡುತ್ತಿದ್ದೀರಿ. ಒತ್ತಡದಿಂದ ನನಗೆ ಏನಾದರೂ ಆದರೆ ಅದರ ಹೊಣೆ ನಿಮ್ಮದು" ಎಂದು ವಾಂಗ್ಚುಕ್ ವಿಡಿಯೋದಲ್ಲಿ ಹೇಳಿರುವುದು ಕೇಳಿಸುತ್ತದೆ.
ಮತ್ತೊಂದು ದೃಶ್ಯದಲ್ಲಿ, "ಬಂಧಿಸಬೇಕಾದರೆ ಬಂಧಿಸಿ, ಆದರೆ ನಾನು ಇಲ್ಲಿಂದ ಹೊರಡುತ್ತಿದ್ದೇನೆ" ಎಂದು ಅವರು ಹೇಳಿರುವುದು ದಾಖಲಾಗಿದೆ.
ಆಸ್ಪತ್ರೆ ಸ್ಪಷ್ಟನೆ
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಸಫ್ದರ್ಜಂಗ್ ಆಸ್ಪತ್ರೆ ಆಡಳಿತ, ಆಸ್ಪತ್ರೆಯೊಳಗಿನ ವಿಡಿಯೋಗ್ರಫಿಗೆ ನಿಷೇಧಿತ ಪ್ರದೇಶದಲ್ಲಿ ವಾಂಗ್ಚುಕ್ ಅವರ ಸಹಚರರು ಜುಲೈ 21ರಂದು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಅದನ್ನು ಶುಕ್ರವಾರ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದೆ. ಅಲ್ಲದೆ ಹೈಕೋರ್ಟ್ನ ಲಿಖಿತ ಆದೇಶ ಆಸ್ಪತ್ರೆಗೆ ತಲುಪುವ ಮುನ್ನವೇ, ಮಾಧ್ಯಮಗಳಲ್ಲಿ ಬಂದ ಮಾಹಿತಿಯ ಆಧಾರದ ಮೇಲೆ ವಾಂಗ್ಚುಕ್ ಆಸ್ಪತ್ರೆಯಿಂದ ಹೊರಡಲು ಪ್ರಯತ್ನಿಸುತ್ತಿದ್ದರು ಎಂದು ಆಸ್ಪತ್ರೆ ಆಡಳಿತ ಹೇಳಿದೆ.
"ಅದೇ ದಿನ ಸಂಜೆ 6.40ಕ್ಕೆ ಹೈಕೋರ್ಟ್ನ ಲಿಖಿತ ಆದೇಶ ಆಸ್ಪತ್ರೆಗೆ ತಲುಪಿದ ತಕ್ಷಣವೇ ವಾಂಗ್ಚುಕ್ ಅವರನ್ನು ಮೆದಾಂತ ಗುರುಗ್ರಾಮದ ವೈದ್ಯರ ತಂಡಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು" ಎಂದು ಆಸ್ಪತ್ರೆ ಆಡಳಿತ ಸ್ಪಷ್ಟಪಡಿಸಿದೆ. ಇದೇ ವೇಳೆ, ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಜಿತೇಂದ್ರ ಸಿಂಗ್ ಹಾಗೂ ತಮ್ಮ ಪತ್ನಿ ಗೀತಾಂಜಲಿ ಆಂಗ್ಮೋ ಅವರ ಸಮ್ಮುಖದಲ್ಲಿ ಗುರುವಾರ ತಡರಾತ್ರಿ ಸೋನಂ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ, ಶಾಂತಿಯುತ ಪ್ರತಿಭಟನಾಕಾರರ ರಕ್ಷಣೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಸದರಿಂದ ಭರವಸೆ ದೊರೆತ ಹಿನ್ನೆಲೆಯಲ್ಲಿ ಉಪವಾಸವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ವಾಂಗ್ಚುಕ್ ತಿಳಿಸಿದ್ದಾರೆ.