ನವದೆಹಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶಾದ್ಯಂತ ನಡೆದ ನಿರಂತರ ಪ್ರತಿಭಟನೆ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ ಚುಕ್ ಜಂತರ್ ಮಂತರ್ನಲ್ಲಿ ನಡೆಸಿದ 26 ದಿನಗಳ ಕಾಲ ಕಠಿಣ ಉಪವಾಸ ಸತ್ಯಾಗ್ರಹ ನಡೆಸಿದ ನಂತರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯನ್ನು ಭಾರತದಲ್ಲಿ ನೇರ ನಾಗರಿಕ ಕ್ರಿಯೆಯ (direct civic action) ನಿಟ್ಟಿನಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ., ದೇಶದ ಯುವಜನತೆ ಮತ್ತು ನಾಗರಿಕರ ದೃಢತೆಯನ್ನು ಶ್ಲಾಘಿಸಿದ್ದಾರೆ.
"ಇದು ಪ್ರಜಾಪ್ರಭುತ್ವದ ಗೆಲುವು. ನೇರ ಪ್ರಜಾಪ್ರಭುತ್ವ. ನೇರವಾಗಿ ಬೀದಿಗಳಿಂದಲೇ ಮೂಡಿಬಂದದ್ದು. ಇದು ಶಾಂತಿ, ತಾಳ್ಮೆ ಮತ್ತು ಪರಿಶ್ರಮದ ಗೆಲುವು. CJP ಮತ್ತು ದೇಶದ 'ಜೆನ್-ಝಡ್' (Gen Z) ಯುವಜನತೆಗೆ ಅಭಿನಂದನೆಗಳು. ಹಾಗೆಯೇ, ಭಯ ಮತ್ತು ಭಯದ ಕುರಿತಾದ ಆತಂಕವನ್ನೂ ತೊರೆದು ದೇಶದ ಮೂಲೆಮೂಲೆಗಳಿಂದ ಎದ್ದುನಿಂತ ಎಲ್ಲಾ ನಾಗರಿಕರಿಗೂ ಧನ್ಯವಾದಗಳು. ಹೊಣೆಗಾರಿಕೆಯಿಂದ ಈಗ ಸುಧಾರಣೆಗಳತ್ತ ಎಂದು ವಾಂಗ್ಚುಕ್ ಪೋಸ್ಟ್ ಮಾಡಿದ್ದಾರೆ.
ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಅಗತ್ಯವಾಗಿದ್ದರೂ, ಈಗ ಅಂತಿಮ ಗುರಿಯು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ರಚನಾತ್ಮಕ ಸುಧಾರಣೆಗಳತ್ತ ಕೇಂದ್ರೀಕೃತವಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳಿಂದ ಉಂಟಾದ ಪರಿಸ್ಥಿತಿಯನ್ನು 'ರಾಷ್ಟ್ರವಿರೋಧಿ ಶಕ್ತಿಗಳು' ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು; ಈ ಹಿನ್ನೆಲೆಯಲ್ಲಿ ವಾಂಗ್ಚುಕ್ ಈ ಹೇಳಿಕೆ ನೀಡಿದ್ದಾರೆ.