ನವದೆಹಲಿ: ನೀಟ್-ಯುಜಿ (NEET-UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಮೂವರು ತಜ್ಞರು ಸೇರಿದಂತೆ ಒಟ್ಟು 13 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಆರೋಪಪಟ್ಟಿಯಲ್ಲಿ ಎನ್ಟಿಎ ಜೀವಶಾಸ್ತ್ರ ತಜ್ಞೆ ಮನೀಷಾ ಮಂದಾರೆ, ಎನ್ಟಿಎ ರಸಾಯನಶಾಸ್ತ್ರ ತಜ್ಞ ಪ್ರಲ್ಹಾದ್ ವಿಠಲರಾವ್ ಕುಲಕರ್ಣಿ ಹಾಗೂ ಎನ್ಟಿಎ ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ಅವರ ಹೆಸರುಗಳಿವೆ.
ಇತರ ಆರೋಪಿಗಳಲ್ಲಿ ಮಧ್ಯವರ್ತಿಗಳೆಂದು ಆರೋಪಿಸಲಾದ ಮನೀಷಾ ಸಂಜಯ್ ವಾಘ್ಮಾರೆ, ಧನಂಜಯ್ ನಿವೃತ್ತಿ ಲೋಖಂಡೆ, ಶುಭಂ ಮಧುಕರ್ ಖೈರ್ನಾರ್, ಯಶ್ ಯಾದವ್, ಮಂಗೀಲಾಲ್ ಬಿವಾಲ್, ವಿಕಾಸ್ ಬಿವಾಲ್, ದಿನೇಶ್ ಬಿವಾಲ್ ಹಾಗೂ ಡಾ. ಮನೋಜ್ ಭಗವಾನರಾವ್ ಶಿರೂರೆ ಸೇರಿದ್ದಾರೆ. ಅಲ್ಲದೆ, ಲಾತೂರ್ನ ಆರ್ಸಿಸಿ ಕೋಚಿಂಗ್ ಇನ್ಸ್ಟಿಟ್ಯೂಟ್ ಮಾಲೀಕ ಶಿವರಾಜ್ ರಘುನಾಥ್ ಮೊಟೆಗಾಂವ್ಕರ್ ಹಾಗೂ ಪುಣೆಯ ಎಪಿಎಂಎ ಕೋಚಿಂಗ್ ಇನ್ಸ್ಟಿಟ್ಯೂಟ್ನ ಭೌತಶಾಸ್ತ್ರ ವಿಭಾಗದ ಅಧ್ಯಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ತೇಜಸ್ ಹರ್ಷದ್ಕುಮಾರ್ ಶಾ ಅವರ ಹೆಸರೂ ಆರೋಪಪಟ್ಟಿಯಲ್ಲಿದೆ.
ಸಿಬಿಐ ಮಾಹಿತಿ ಪ್ರಕಾರ, ಆರೋಪಪಟ್ಟಿಯಲ್ಲಿ ಹೆಸರಿಸಲಾದ ಎಲ್ಲ 13 ಆರೋಪಿಗಳೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಆರ್ಥಿಕ ಅಪರಾಧ ವಿಭಾಗವು (Economic Offences Wing) ಈ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ರಚಿಸಲಾದ ವಿಶೇಷ ತ್ವರಿತ ನ್ಯಾಯಾಲಯದ ಮುಂದೆ ಅದನ್ನು ಮಂಡಿಸಲಾಗುತ್ತದೆ. ಮುಂದಿನ ಕ್ರಮವನ್ನು ನ್ಯಾಯಾಲಯ ನಿರ್ಧರಿಸಲಿದೆ.
ಸಿಬಿಐ ಪ್ರಕಾರ, ಈ ಪ್ರಕರಣದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಆರೋಪಪಟ್ಟಿಯಲ್ಲಿರುವ ಎಲ್ಲರೂ ಖಾಸಗಿ ವ್ಯಕ್ತಿಗಳಾಗಿದ್ದಾರೆ.
ಈ ಆರೋಪಪಟ್ಟಿಗೆ 360 ಸಾಕ್ಷಿದಾರರ ಹೇಳಿಕೆಗಳು, 422 ದಾಖಲೆಗಳು ಹಾಗೂ 43 ವಸ್ತು ಸಾಕ್ಷ್ಯಗಳು (Material Exhibits) ಬೆಂಬಲವಾಗಿವೆ.
ಇದಕ್ಕೂ ಮುನ್ನ ಸೋಮವಾರ ನಡೆದ ವಿಚಾರಣೆಯಲ್ಲಿ, ತ್ವರಿತ ನ್ಯಾಯಾಲಯವು ತನಿಖಾ ಸಂಸ್ಥೆಯ ಪರವಾಗಿ ಅಧಿಕಾರಿಯೊಬ್ಬರು ಹಾಜರಾಗುವಂತೆ ನಿರ್ದೇಶನ ನೀಡಿದ್ದು, ಆರೋಪಿಗಳಾದ ದಿನೇಶ್ ಬಿವಾಲ್ ಹಾಗೂ ವಿಕಾಸ್ ಬಿವಾಲ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿತ್ತು.
ಪ್ರಕರಣವನ್ನು ಬೇಧಿಸಲು ಸಿಬಿಐ 72 ತನಿಖಾಧಿಕಾರಿಗಳು ಮತ್ತು ಎಂಟು ಸೈಬರ್ ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ಹಲವು ತಂಡಗಳನ್ನು ರಚಿಸಿತ್ತು.
ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 92 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ಶೋಧ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಡಿಜಿಟಲ್ ಸಂಗ್ರಹ ಸಾಧನಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿತ್ತು.
ತನಿಖೆಯ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯ ಸಂಪೂರ್ಣ ಸರಪಳಿಯನ್ನು ಪತ್ತೆಹಚ್ಚಲಾಗಿದ್ದು, ಸೋರಿಕೆಯಾದ ಪ್ರಶ್ನೆಗಳ ಮೂಲವನ್ನು ಗುರುತಿಸಿ, ಪರೀಕ್ಷೆಗೆ ಮುನ್ನ ಅವು ಅಭ್ಯರ್ಥಿಗಳ ನಡುವೆ ಹೇಗೆ ಹರಡಿದವು ಎಂಬುದನ್ನು ಪತ್ತೆ ಮಾಡಲಾಗಿದೆ ಎಂದು ಸಿಬಿಐ ತಿಳಿಸಿದೆ.
ತನಿಖೆಯ ಭಾಗವಾಗಿ ಆರೋಪಿಗಳ ಬ್ಯಾಂಕ್ ಖಾತೆಗಳು, ಬ್ಯಾಂಕ್ ಲಾಕರ್ಗಳು ಹಾಗೂ ಒಂದು ಡಿಮ್ಯಾಟ್ ಖಾತೆಯನ್ನು ಸಹ ಮುಟ್ಟುಗೋಲು ಹಾಕಲಾಗಿದೆ.
ಡಿಜಿಟಲ್ ವಿಧಿವಿಜ್ಞಾನ ಸಾಕ್ಷ್ಯಗಳು, ಕೈಬರಹ ವಿಶ್ಲೇಷಣೆ ಹಾಗೂ ತಜ್ಞರ ಪರೀಕ್ಷೆಗಳ ಮೂಲಕ ಪ್ರಶ್ನೆಪತ್ರಿಕೆ ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿದ್ದು, ಅದನ್ನು ಅಭ್ಯರ್ಥಿಗಳ ನಡುವೆ ಹಂಚಿಕೆ ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ ಎಂದು ಸಿಬಿಐ ಹೇಳಿದೆ.
ಇನ್ನೂ ತನಿಖೆ ಮುಂದುವರಿದಿದ್ದು, ಹೆಚ್ಚಿನ ಸಾಕ್ಷ್ಯಗಳು ಲಭ್ಯವಾದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಸಿಬಿಐ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಸೆಕ್ಷನ್ಗಳಾದ 315(5), 318(4), 61(2), 238 ಹಾಗೂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಇದರ ಜೊತೆಗೆ, ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 13(2) ಮತ್ತು 13(1)(ಎ) ಅಡಿಯಲ್ಲಿ ಕೂಡ ಆರೋಪಗಳನ್ನು ದಾಖಲಿಸಲಾಗಿದೆ.
ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ಜಾರಿಗೆ ತರಲಾದ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ಕಾಯ್ದೆ, 2024ರ ಸೆಕ್ಷನ್ಗಳು 3, 4, 5 ಮತ್ತು 11 ಹಾಗೂ ಸೆಕ್ಷನ್ 10ರ ಅಡಿಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣವು ಮೇ 3, 2026ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮೇ 12ರಂದು ಪರೀಕ್ಷೆಯನ್ನು ರದ್ದುಪಡಿಸಿತ್ತು.
ಅದೇ ದಿನ ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಸಿಬಿಐ ಎಫ್ಐಆರ್ ದಾಖಲಿಸಿ ರಾಷ್ಟ್ರವ್ಯಾಪಿ ತನಿಖೆ ಆರಂಭಿಸಿತು.
ಆರೋಪಪಟ್ಟಿ ಸಲ್ಲಿಕೆಯೊಂದಿಗೆ ತನಿಖೆ ಮಹತ್ವದ ಹಂತ ತಲುಪಿದೆ. ಈಗ ರೌಸ್ ಅವೆನ್ಯೂ ವಿಶೇಷ ತ್ವರಿತ ನ್ಯಾಯಾಲಯ ಆರೋಪಪಟ್ಟಿಯನ್ನು ಪರಿಶೀಲಿಸಿ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಇರುವ ವ್ಯಾಪಕ ಸಂಚಿನ ಕುರಿತು ತನಿಖೆ ಇನ್ನೂ ಮುಂದುವರಿದಿದೆ ಎಂದು ಸಿಬಿಐ ತಿಳಿಸಿದೆ. ಇದೇ ವೇಳೆ, ಈ ಹಿಂದೆ ಪ್ರಕರಣದಲ್ಲಿ ಶಂಕಿತನಾಗಿದ್ದ ಒಬ್ಬ ವ್ಯಕ್ತಿಯ ಪಾತ್ರವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ದೊರಕದ ಕಾರಣ, ಆತನ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.