ದೆಹಲಿ: ಪರೀಕ್ಷಾ ಸುಧಾರಣೆಗೆ ಐಟಿ ದಿಗ್ಗಜ ನಂದನ್ ನಿಲೇಕಣಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಈ ಕಮಿಟಿ ವಿರುದ್ಧವೇ ಇದೀಗ ಕಾಂಗ್ರೆಸ್ ನಾಯಕರು ಅಪಸ್ವರ ಎತ್ತಿದ್ದಾರೆ.
ಸಂಸತ್ತಿನಲ್ಲಿ ಮಂಗಳವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸದೊಂದು ಸಂಘರ್ಷದ ಸನ್ನಿವೇಶ ನಿರ್ಮಾಣವಾಯಿತು. ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯರೊಬ್ಬರನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು "ಗೋಮೂತ್ರ ತಜ್ಞ" ಎಂದು ಬಣ್ಣಿಸಿದ್ದೇ ಇದಕ್ಕೆ ಕಾರಣವಾಯಿತು.
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರಂತೂ ಟಾಸ್ಕ್ ಫೋರ್ಸ್ ಸದಸ್ಯ ಡಾ. ವಿ. ಕಾಮಕೋಟಿಯವರನ್ನು ‘ಗೋಮೂತ್ರ ತಜ್ಞ’ ಅಂತ ಟೀಕಿಸಿದ್ದಾರೆ. ಇದಕ್ಕೆ ರಾಜಕೀಯ ಅಷ್ಟೇ ಅಲ್ಲ, ಸಾರ್ವಜನಿಕವಲಯದಲ್ಲೂ ಆಕ್ಷೇಪ ಕೇಳಿ ಬಂದಿದೆ.
ಪ್ರಿಯಾಂಕಾ ಗಾಂಧಿ ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸಲಿಲ್ಲವಾದರೂ, ಅವರ ಹೇಳಿಕೆಗಳನ್ನು ಐಐಟಿ ಮದ್ರಾಸ್ನ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು ಉದ್ದೇಶಿಸಿ ಆಡಿದ ಮಾತುಗಳೆಂದೇ ವ್ಯಾಪಕವಾಗಿ ಅರ್ಥೈಸಲಾಗಿದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಸುಧಾರಣೆಗಳನ್ನು ಶಿಫಾರಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಉನ್ನತ ಮಟ್ಟದಕಾರ್ಯಪಡೆಯ ಆರು ವಿಷಯ ತಜ್ಞರಲ್ಲಿ ಕಾಮಕೋಟಿ ಕೂಡ ಒಬ್ಬರಾಗಿದ್ದಾರೆ.
ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರವು ಮತ್ತೊಂದು ಸಮಿತಿಯನ್ನು ಅವಲಂಬಿಸಿರುವುದನ್ನು ಟೀಕಿಸಿದರು. ನಂದನ್ ನೀಲೆಕಣಿ ನೇತೃತ್ವದ ಪರೀಕ್ಷಾ ಸುಧಾರಣಾ ಕಾರ್ಯಪಡೆ ಔಚಿತ್ಯವನ್ನು ಅವರು ಪ್ರಶ್ನಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್ಟಿಎ) ಸುಧಾರಿಸಲು ಸರ್ಕಾರ ಹೊಸದಾಗಿ ರಚಿಸಿರುವ ಉನ್ನತಾಧಿಕಾರದ ಕಾರ್ಯಪಡೆಯನ್ನು ಟೀಕಿಸಿದ್ರು. "ಈ ಸಮಿತಿಯಲ್ಲಿ ಗೋಮೂತ್ರ ತಜ್ಞರೂ ಇದ್ದಾರೆ. ಅಂತಹ ಜನರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಏನು ಗೊತ್ತು?" ಎಂದು ಅವರು ಪ್ರಶ್ನಿಸಿದರು.
ಗೌರವಾನ್ವಿತ ಸಭಾಪತಿಗಳೇ, ನಿಮ್ಮ ಮೂಲಕ ನಾನು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಇದನ್ನು ಹೇಳಲು ಬಯಸುತ್ತೇನೆ. ಬಹುಶಃ ಅವರು ತಮ್ಮ ಸಲಹೆಗಾರರನ್ನು ಬದಲಾಯಿಸಿಕೊಳ್ಳಬೇಕು. ಹೊಸ ಸಮಿತಿಗಳನ್ನು ರಚಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ" ಎಂದು ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದರು.